ಒಲವೇ… ಭಾಗ – ೯

ಅಭಿ, ನಾನು ಮಾತಾಡ್ತನೇ ಇದ್ದೀನಿ. ನೀನು ಮಾತ್ರ ಮೌನವಾಗಿದ್ದಿಯಲ್ಲ? ಏನಾದ್ರು ಮಾತಾಡೋ. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ. ನನ್ಗಂತೂ ಜೀವನವನ್ನ ಇಲ್ಲಿಗೇ ಕೊನೆಗಾಣಿಸಿಬಿಡುವ ಅನ್ನಿಸ್ತಾ ಇದೆ. ಒಂದ್ವೇಳೆ ನಾವಿಬ್ರು ಒಂದಾಗುವುದಕ್ಕೆ ಸಾಧ್ಯವಾಗದೆ ಇದ್ರೆ ಬದುಕನ್ನು ಕೊನೆಗಾಣಿಸುವುದೇ ಒಳ್ಳೆಯ ಮಾರ್ಗ ಅನ್ನಿಸ್ತಾ ಇದೆ. ಮಾತಾಡು ಅಭಿ, ಅದೇ ಒಳ್ಳೆ ದಾರಿಯಲ್ವ?ಬಿಕ್ಕಳಿಸಿ ಅಳಲು ಪ್ರಾರಂಭಿಸಿದಳು.

ಎಲ್ಲಾ ಘಟನೆಗಳು ನಿರೀಕ್ಷಿತವೇ. ಆದರೆ, ಇಷ್ಟೊಂದು ಬೇಗ ಬಂದು ಬಿಡುತ್ತದೆ ಎಂದು ಅಭಿಮನ್ಯು ಎಣಿಸಿರಲಿಲ್ಲ. ಪ್ರೀತಿಯ ಸ್ವಚ್ಛಂದ ವಿಹಾರ ಬಹುತೇಕ ಮುಕ್ತಾಯಗೊಂಡಿತು. ಇನ್ನು ಕಲ್ಲುಮುಳ್ಳಿನ ಹಾದಿಯಲ್ಲಿ ಮುನ್ನಡೆಯೋದು ಅನಿವಾರ್ಯ ಅಂದುಕೊಂಡ ಅಭಿಮನ್ಯು ಆಕೆಯನ್ನು ಸಂತೈಸಲು ಮುಂದಾದ.

ಈಗ ಅತ್ತು ಏನು ಸುಖ ಹೇಳು? ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೇ ಇದೆ. ನಾನು ಮೊದ್ಲೇ ಹೇಳಿಲಿಲ್ವ? ನಿಮ್ಮ ಮನೆಯಲ್ಲಿ ನಮ್ಮಿಬ್ರ ಪ್ರೀತಿಯನ್ನ ಸ್ವೀಕಾರ ಮಾಡೋಲ್ಲಾಂಥ. ಆದರೆ, ನಿನ್ಗೆ ಆಗ ಅದು ತಮಾಷೆಯ ಮಾತಾಗಿತ್ತು. ಪ್ರೀತಿ ಅಂದ ಮೇಲೆ ವಿರೋಧ ಕೂಡ ಇಲೇ ಬೇಕು. ಸಾಮಾನ್ಯವಾಗಿ ಯಾವ ತಂದೆ, ತಾಯಿಯೂ ಕೂಡ ಪ್ರೀತಿಯನ್ನ ಸ್ವೀಕಾರ ಮಾಡಿಕೊಳ್ಳುವ ಮನಸ್ಸು ಮಾಡೋದಿಲ್ಲ. ಒಂದ್ವೇಳೆ ನಾವಿಬ್ರು ಮದ್ವೆಯಾಗಿ ನಮಗೊಂದು ಹೆಣ್ಣು ಮಗು ಜನಿಸಿ ಆ ಮಗು ಬೆಳೆದು ದೊಡ್ಡವಳಾದ ನಂತರ ಪ್ರೇಮ ವಿವಾಹ ಮಾಡಿಕೊಳ್ಳಲು ಮುಂದಾದರೆ ಖಂಡಿತವಾಗಿಯೂ ಆ ಪ್ರೀತಿಯನ್ನು ನಾವು ವಿರೋಧಿಸುತ್ತೇವೆ. ಕಾರಣವಿಷ್ಟೆ, ಮಗಳ ಭವಿಷ್ಯ ಎಲ್ಲಿ ಹಾಳಾಗಿ ಹೋಗುತ್ತದೆಯೋ ಎಂಬ ಭಯ. ಆ ಭಯ ಎಲ್ಲಾ ತಂದೆ, ತಾಯಂದಿರಲ್ಲೂ ಇದ್ದೇ ಇರುತ್ತೆ. ನಮ್ಮ ಮದ್ವೆಗೆ ನಿನ್ನ ಅಪ್ಪ, ಅಮ್ಮ ವಿರೋಧ ಮಾಡ್ತಾ ಇದ್ದಾರೆ ಅಂದ ಮಾತ್ರಕ್ಕೆ ನಾವೇಕೆ ಚಿಂತೆ ಮಾಡ್ಬೇಕು. ಸೂಕ್ತ ಸಮಯದಲ್ಲಿ ಇಬ್ಬರು ಮದ್ವೆಯಾಗುವ. ನೀನು ಅದರ ಬಗ್ಗೆ ತಲೆ ಕೆಡಿಸಿಕೊಳ್ಬೇಡ

ಪ್ರೀತಿಯ ಹಾದಿ ಎಷ್ಟೊಂದು ದುರ್ಗಮ ಅನ್ನಿಸತೊಡಗಿತು. ಯೋಚಿಸಿದಷ್ಟು ಪ್ರಶ್ನೆಗಳೇ ಎದುರಿಗೆ ಬಂದು ಕುಳಿತುಕೊಳ್ಳಲು ಪ್ರಾರಂಭಿಸಿತು. ಆ ಪ್ರಶ್ನೆಗಳು ಒಂದೊಂದಾಗಿ ಮನಸ್ಸನ್ನು ಹಿಂಡಿಹಿಪ್ಪೆ ಮಾಡಿ ಹಾಕಲು ಪ್ರಾರಂಭಿಸಿತು. ಆದರೆ, ಆ ನೋವಿನ ಲ್ಲಿಯೂ ಕೂಡ ಒಂದು ನಲಿವು ಅಡಗಿ ಕುಳಿತ್ತಿದೆ. ವಿವಾಹ ಎಂಬ ಬಂಧನದಿಂದ ಮಾತ್ರ ಆ ನಲಿವು ಪಡೆದುಕೊಳ್ಳಲು ಸಾಧ್ಯವೆಂಬುದು ಇಬ್ಬರ ಅರಿವಿಗೆ ಬಂದಿತು. ಅದೊಂದೇ ಮುಂದೆ ಉಳಿದಿರುವ ಏಕೈಕ ಮಾರ್ಗ. ಆದರೆ ಆ ಹಾದಿ ಅಷ್ಟೊಂದು ಸುಗಮವಾಗಿಲ್ಲ ಎಂಬ ಅರಿವೂ ಕೂಡ ಅವರಿಬ್ಬರಲ್ಲಿತ್ತು. ಎಲ್ಲರ ವಿರೋಧ ಕಟ್ಟಿಕೊಂಡು ಮದುವೆಯಾಗಿ ಬಿಡಬಹುದು. ಆದರೆ, ವಿಚಾರ ಅದಲ್ಲ. ವಿವಾಹವಾದ ನಂತರ ಶ್ರೀಮಂತ ಸಮಾಜ ನಮ್ಮನ್ನು ನೆಮ್ಮದಿಯಿಂದ ಬದುಕು ನಡೆಸಲು ಬಿಡುತ್ತದಾ? ಎಂಬ ಪ್ರಶ್ನೆ ಅವರಿಬ್ಬರನ್ನು ಬಹುವಾಗಿ
ಕಾಡಿತು. ಎಲ್ಲಾ ಆತಂಕಗಳ ನಡುವೆಯೂ ವಿವಾಹ ಬಂಧನದಲ್ಲಿ ಬಂಧಿಯಾಗಬೇಕೆಂದು ಇಬ್ಬರು ಮನದಲ್ಲಿಯೇ ಅಂದುಕೊಂಡರು.

ನನಗ್ಯಾಕೋ ಭಯ ಆಗ್ತಾ ಇದೆ ಅಭಿ, ಎಲ್ಲಿ ನಿನ್ನ ಕಳೆದುಕೊಳ್ಳುತ್ತೇನೋ ಅಂತ ಭಯ ಆಗ್ತಾ ಇದೆ. ಅಪ್ಪ, ಅಮ್ಮ ಇಷ್ಟೊಂದು ಕಠೋರವಾಗಿ ನಡೆದುಕೊಳ್ಳುತ್ತಾರೆ ಅಂತ ಕನಸ್ಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅವರ ಸ್ವಾರ್ಥ ಸಾಧನೆಗೋಸ್ಕರ ನನ್ನ ಬದುಕನ್ನೇ ಬಲಿತೆಗೆದುಕೊಳ್ಳೋದಕ್ಕೆ ನೋಡ್ತಾ ಇದ್ದಾರೆ. ಅವರಿಬ್ಬರಿಗೆ ನಾನು ಹಾಳಾಗಿ ಹೋದರೂ ಚಿಂತೆ ಇಲ್ಲ. ಆದರೆ, ಅವರು ಮಾತ್ರ ಸುಖವಾಗಿಬೇಕು. ಅಷ್ಟೇ ಅವರ ಆಸೆ, ಆಕಾಂಕ್ಷೆ. ಅದಕ್ಕೆ ಇಷ್ಟೆಲ್ಲ ರಾದ್ಧಾಂತ ಮಾಡ್ತಾ ಇದ್ದಾರೆ. ಶ್ರೀಮಂತ ಹುಡುಗನೊಂದಿಗೆ ಮದ್ವೆ ಮಾಡಿಸಿ ಅದೇನು ಸಾಧಿಸಬೇಕೂಂತ ಹೊರಟ್ಟಿದ್ದಾರೋ!? ನನ್ಗಂತೂ ಗೊತ್ತಾಗ್ತಾ ಇಲ್ಲ. ಎಷ್ಟೇ ಹೇಳಿದರೂ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ. ಒಂದೊಂದು ಸಲ ಸತ್ತು ಬಿಡುವ ಅನ್ನಿಸ್ತದೆ. ನನ್ಗೆ ಈ ಕ್ಷಣದಲ್ಲಿಯೂ ಕೂಡ ಹಾಗೆ ಅನ್ನಿಸ್ತಾ ಇದೆ. ಆ ಹಾದಿಯನ್ನೇ ತುಳಿದು ಬಿಡುವ ಅಭಿ, ಸಾಕಿನ್ನು ಈ ಬದುಕು. ದುಃಖದ ಬದುಕಿಗೆ ಮಂಗಳ ಹಾಡಿ ಬಿಡುವ. ಎಷ್ಟು ದಿನಾಂತ ನೋವನ್ನೆಲ್ಲ ನುಂಗಿಕೊಂಡು ಬದುಕೋದಕ್ಕೆ ಸಾಧ್ಯ ಹೇಳು? ನಾವು ಸತ್ತ ನಂತರ ಅವರು ನೆಮ್ಮದಿಯ ಜೀವನ ನಡೆಸಲಿ. ನೀನು ಅದಕ್ಕೆ ಗಟ್ಟಿ ಮನಸ್ಸು ಮಾಡ್ಬೇಕು.

ಸಾವಿನ ಕಡೆಗೆ ಆಕೆಯ ಒಲವು ಮತ್ತಷ್ಟು ಬಲಗೊಳ್ಳುತ್ತಾ ಸಾಗುತ್ತಿರುವುದನ್ನು ಕಂಡು ಅಭಿಮನ್ಯು ಕಂಗಾಲಾದ. ಆವೇಶ ಭರಿತಳಾಗಿ ಏನೇನೋ ಮಾತಾಡುತ್ತಿದ್ದಾಳೆಂದು ಪ್ರಾರಂಭದಲ್ಲಿ ಅಂದುಕೊಂಡಿದ್ದ. ಆದರೆ, ಇದೀಗ ಅದೇ ವಿಚಾರವನ್ನು ಪದೇ ಪದೇ ಮುಂದಿಡುತ್ತಿದ್ದಾಳೆ. ಅಕ್ಷರ ಎಲ್ಲಾದರು ಆತ್ಮಹತ್ಯೆಯ ಹಾದಿ ತುಳಿದುಬಿಡುತ್ತಾಳೋ ಏನೋ? ಎಂಬ ಆತಂಕ ಕವಿದುಕೊಳ್ಳಲು ಪ್ರಾರಂಭಿಸಿತು. ಆಕೆ ಸತ್ತು ಹೋದರೆ ನಾನು ಬದುಕಿದ್ದೇನು ಪ್ರಯೋಜನ? ಅನ್ನಿಸಿತು. ಎಲ್ಲರ ಜೀವನದಲ್ಲಿ ಉತ್ಸಾಹ ತುಂಬುತ್ತಿದ್ದ ಅಕ್ಷರ ಇಂದು ಜೀವನವನ್ನೇ ಕೊನೆಗಾಣಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾಳೆ. ಆಕೆಯ ಮನದಲ್ಲಿ ಅದೆಷ್ಟು ಯಾತನೆಗಳು ತುಂಬಿಕೊಂಡಿರಬಹುದು? ಇಂತಹ ಒಂದು ಕಠೋರ ಹಾದಿಯ ಕಡೆಗೆ ಆಲೋಚಿಸಲು? ಪ್ರೀತಿಗಾಗಿ ಆತ್ಮಹತ್ಯೆಯ ಹಾದಿ ತುಳಿಯಬೇಕ!? ಆತ್ಮಹತ್ಯೆಗೆ ತಯಾರಾಗುವಷ್ಟು ಧೈರ್ಯವನ್ನು ಪ್ರೀತಿಯಲ್ಲಿ ಜಯಿಸೋದಕ್ಕೆ ವಿನಿಯೋಗಿಸಿದರೆ ಉತ್ತಮ ಬದುಕು ಕಂಡುಕೊಳ್ಳಬಹುದುಲ್ವ? ಅಷ್ಟಕ್ಕೂ ತನ್ನಿಂದ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಸಾಧ್ಯವಿದೆಯಾ? ಖಂಡಿತ ಇಲ್ಲ. ಬದುಕಲೇ ಬೇಕು. ನನಗೋಸ್ಕರ ಅಲ್ಲದಿದ್ದರೂ ನನ್ನ ಅಮ್ಮನಿಗೋಸ್ಕರ. ನನಗೋಸ್ಕರ ಆಕೆ ಜೀವನದಲ್ಲಿ ಏನೆಲ್ಲ ಕಷ್ಟ ಅನುಭವಿಸಲಿಲ್ಲ. ಆಕೆಯನ್ನು ಬದುಕಿನ ಕೊನೆಯ ಘಟ್ಟದಲ್ಲಿ ಸಂತೋಷದಲ್ಲಿಡಬೇಕಾದದ್ದು ನನ್ನ ಧರ್ಮವಲ್ಲವೇ? ಒಂದುವೇಳೆ ಅಕ್ಷರ ಆತ್ಮಹತ್ಯೆ ಮಾಡಿಕೊಂಡರೆ ಅವರ ಅಪ್ಪ, ಅಮ್ಮನಿಗೆ ನಷ್ಟವೇನು ಇಲ್ಲ. ಸಾಕಷ್ಟು ಸಂಪತ್ತು ಕೂಡಿಟ್ಟುಕೊಂಡಿದ್ದಾರೆ. ಇನ್ನೇನಿದ್ದರೂ ಮಗಳನ್ನು ಕಳೆದುಕೊಂಡ ಚಿಂತೆ ಮಾತ್ರ ಕಾಡಬಹುದು. ಒಂದ್ವೇಳೆ ನಾನು ಸತ್ತು ಹೋದರೆ ಅಮ್ಮ ಬದುಕಿರೋದಕ್ಕೆ ಸಾಧ್ಯ ಇಲ್ಲ. ಅಮ್ಮನಿಗೆ ನಾನೊಬ್ಬನೇ ಆಸರೆ. ನನ್ನ ಕಳೆದುಕೊಂಡರೆ ಆಕೆಗೆ ಯಾರು ದಿಕ್ಕು? ಅಂದುಕೊಂಡ.

ಅಕ್ಷರ, ಸಾಯುವಂತ ಅನಿವಾರ್ಯತೆ ನಿರ್ಮಾಣವಾಗಿದೆಯಾ? ಅಥವಾ ಅಂತಹ ಒಂದು ಅನಿವಾರ್ಯತೆಯನ್ನ ನಾವೇ ಸೃಷ್ಟಿ ಮಾಡಿಕೊಳ್ತಾ ಇದ್ದೇವಾ? ಸತ್ತರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗೋದಿಲ್ಲ. ಒಂದು ಉತ್ತಮ ಬದುಕಿಗೋಸ್ಕರ ಹೋರಾಟ ನಡೆಸೋಣ. ಸ್ವಲ್ಪ ಕಷ್ಟ ಅನ್ನಿಸ್ಬೊಹುದು. ಕಷ್ಟಪಟ್ಟರೆ ಮುಂದೆ ಸುಖ ನಮಗಾಗಿ ಕಾದು ಕುಳಿತ್ತಿರುತ್ತದೆ. ಆ ಹಾದಿಯಲ್ಲಿ ಮುನ್ನಡೆಯಬೇಕೇ ವಿನಃ ಆತ್ಮಹತ್ಯೆಯ ಹಾದಿ ಕಡೆಗಲ್ಲ. ಯಾಕಾಗಿ ಇಷ್ಟೊಂದು ದುಃಖ ಪಡ್ತಾ ಇದ್ದೀಯ? ಎಲ್ಲದಕ್ಕೂ ತಾಳ್ಮೆ ಮುಖ್ಯ. ನೀನೇನು ಚಿಂತೆ ಮಾಡ್ಕೋಬೇಡ. ನಾಳೆನೇ ನಾನು ಮೈಸೂರಿಗೆ ಹೊರಟು ಬತೇನೆ. ಅಲ್ಲೇ ಕೂತು ಎಲ್ಲಾ ಮಾತಾಡುವ ಆಕೆಯಲ್ಲಿ ಭರವಸೆ ತುಂಬುವ ಮಾತುಗಳ್ನಾಡಿದ.

ಅಭಿಮನ್ಯು ನಿಗದಿತ ಸಮಯಕ್ಕಿಂತ ಮೊದಲೇ ಅಂಗಡಿಯ ಬಾಗಿಲೆಳೆದು ಮನೆಯ ಹಾದಿ ತುಳಿದ. ಮನೆಗೆ ಪ್ರವೇಶಿಸಿ ಅಮ್ಮನೊಂದಿಗೆ ಗಂಟೆಗಟ್ಟಲೇ ಹರಟೆ ಹೊಡೆಯುತ್ತಿದ್ದ ಅಭಿಮನ್ಯುವಿಗೆ ಇಂದು ಅಮ್ಮನೊಂದಿಗೆ ಮಾತಾಡಬೇಕೆಂದು ಅನ್ನಿಸಲಿಲ್ಲ. ಮನದೊಳಗೆ ತುಂಬ ಪ್ರೀತಿಯ ಮುಂದಿನ ಭವಿಷ್ಯದ ಚಿಂತೆ ತುಂಬಿಕೊಂಡಿತ್ತು. ಮಗನ ಮೌನ ಕಂಡು ವಾತ್ಸಲ್ಯಳಿಗೆ ಎಲ್ಲವೂ ಮನದಟ್ಟಾಗಿ ಹೋಯಿತು. ಕೆಲವು ಗಂಟೆಗಳ ಹಿಂದಷ್ಟೇ ರಾಜಶೇಖರ್ ಮನೆ ತನಕ ಬಂದು ಹೋಗಿದ್ದರು. ನನ್ನ ಮಗಳನ್ನ ಮರೆತು ಬಿಡೋದಕ್ಕೆ ನಿಮ್ಮ ಮಗನಿಗೆ ಹೇಳಿ ಎಂದು ಎಚ್ಚರಿಕೆ ನೀಡಿ ಹೋಗಿದ್ದರು.  ಅಭಿಮನ್ಯುವಿನ ಮೌನ, ಮುಖದಲ್ಲಿ ಕವಿದಿರುವ ಆತಂಕವನ್ನು ಗಮನಿಸಿದ ವಾತ್ಸಲ್ಯ ಕಳವಳಗೊಂಡರು. ಇನ್ನು ಸುಮ್ಮನಿದ್ದರೆ ಮಗನನ್ನು ಕಳೆದುಕೊಳ್ಳೋದರಲ್ಲಿ ಅನುಮಾನವೇ ಇಲ್ಲ ಎಂದು ಅಂದುಕೊಂಡ ವಾತ್ಸಲ್ಯ ಮಗನ ಬಳಿ ಕುಳಿತು ಮಗನ ತಲೆಯನ್ನೊಮ್ಮೆ ಪ್ರೀತಿಯಿಂದ ತಡವಿ ಕೇಳಿದರು.

ಮಗ, ನಿನ್ಗೆ ಅಕ್ಷರಳನ್ನ ಮರೆಯೋದಕ್ಕೆ ಸಾಧ್ಯ ಇಲ್ವ?

ನಾನೇಕೆ ಮರೀಬೇಕು, ನೀನು ಏನ್ ಹೇಳ್ತಾ ಇದ್ದೀಯ? ನನ್ಗೊಂದು ಅರ್ಥವಾಗ್ತಾ ಇಲ್ಲ. ಅಮ್ಮನಿಗೆ ಪ್ರೀತಿಯ ವಿಚಾರ ತಿಳಿದಿಲ್ಲವೆಂದು ಅಂದುಕೊಂಡು ಹೇಳಿದ.

ನನ್ಗೆ ಎಲ್ಲಾ ಗೊತ್ತು ಮಗ, ನೀನು ಅವಳನ್ನ ಪ್ರೀತಿ ಮಾಡ್ತಾ ಇರೋ ವಿಚಾರ ನಿನ್ನ ಬಾಯಿಂದ ಕೇಳದೆ ಇದ್ರೂ ನನ್ಗೆ ಎಲ್ಲಾ ಅರ್ಥವಾಗುತ್ತೆ. ಎಷ್ಟೇ ಆದ್ರೂ ನಿನ್ನ ವಯಸ್ಸನ್ನು ದಾಟಿ ಬಂದವಳು ತಾನೇ  ನಾನು. ಎಲ್ಲ ವಿಷಯ ಗೊತ್ತಿದ್ದೂ ನಾನು ಸುಮ್ಮನಿದ್ದೆ. ಯಾಕೆ ನಿನ್ನ ಮನಸ್ಸಿಗೆ ನೋಯಿಸೋದು ಅಂತ. ಆದರೆ, ಇನ್ನು ನನ್ನಿಂದ ಸಹಿಸಿಕೊಳ್ಳೋದಕ್ಕೆ ಸಾಧ್ಯ ಇಲ್ಲ. ದಯವಿಟ್ಟು ಅವಳನ್ನ ಪ್ರೀತಿ ಮಾಡ್ಬೇಡ. ಅದು ನಮ್ಮ ಕೈಗೆಟುಕುವಂತ ಹೂವಲ್ಲ ದುಃಖದಿಂದ ಮಗನಲ್ಲಿ ವಿನಂತಿಸಿಕೊಂಡರು.

ಅಮ್ಮ, ನೀನು ನಮ್ಮನ್ನ ತಪ್ಪಾಗಿ ತಿಳ್ಕೊಂಡಿದ್ದೀಯ. ನಾವು ಪ್ರೀತಿ ಮಾಡ್ತಾ ಇಲ್ಲ. ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಷ್ಟೇ.

ಸಾಕು ಸುಮ್ನಿರು. ನೀನು ಪ್ರೀತಿ ಮಾಡ್ತಾ ಇಲ್ಲ ಅನ್ನೋದಾದ್ರೆ ಅವಳ ಅಪ್ಪ ರಾಜಶೇಖರ್ ಮನೆ ತನ್ಕ ಯಾಕೆ ಬಬೇಕಿತ್ತು? ಮನೆಗೆ ಬಂದು ಬಾಯಿಗೆ ಬಂದಂತೆ ಮಾತಾಡಿ ಹೋದ. ನನ್ಗೆ ಯಾಕೋ ಭಯ ಆಗ್ತಾ ಇದೆ ಮಗ. ಈ ದೊಡ್ಡವರ ಸಹವಾಸ ನಮ್ಗೇಕೆ? ನಿನ್ಗೆ ಒಳ್ಳೆಯ ಹುಡುಗಿ ನೋಡಿ ಮದ್ವೆ ಮಾಡಿಸುವ ಜವಾಬ್ದಾರಿ ನಂದು. ನೀನು ಆ ಹುಡುಗಿಯ ಬಗ್ಗೆ ತಲೆಕೆಡಿಸಿಕೊಳ್ಬೇಡ. ಮೊದ್ಲು ಅವಳನ್ನ ಮರೆಯುವ ಪ್ರಯತ್ನ ಮಾಡು. ನೀನೇನಾದರು ಆ ಹುಡುಗಿಯನ್ನ ಮದ್ವೆಯಾದ್ರೆ ಅವಳಪ್ಪ ಖಂಡಿತ ನಿನ್ನ ಜೀವ ಸಹಿತ ಉಳಿಸೋದಿಲ್ಲ. ಹಾಗೊಂದ್ವೇಳೆ ಏನಾದರು ಆಗೋದ್ರೆ ನನ್ಗಂತು ಬದುಕಿರೋ ಶಕ್ತಿ ಇಲ್ಲ. ನಾನೂ ಸತ್ತೋಗ್ತಿನಿ. ನೀನಿಲ್ಲದೆ ಇದ್ದರೆ ಯಾರಿಗೋಸ್ಕರ ಬದುಕಬೇಕು ಹೇಳು? ನಿಮ್ಮಪ್ಪ ಇದ್ದಿದ್ರೆ ಹೀಗೆಲ್ಲ ಆಗ್ತಾ ಇಲಿಲ್ಲ. ಆದರೆ, ನಾನೊಬ್ಬಳು ಹೆಣ್ಣು ಏನು ತಾನೆ ಮಾಡೋದಕ್ಕೆ ಸಾಧ್ಯ? ನಿನ್ಗಂತೂ ಬುದ್ಧಿ ಹೇಳೋ ವಯಸ್ಸಲ್ಲ ಇದು. ಎಲ್ಲವನ್ನು ನೀನೇ ಅರ್ಥಮಾಡ್ಕೊಂಡು ಒಳ್ಳೆಯ ನಿರ್ಧಾರ ತಗೊಳ್ಳುವ ಶಕ್ತಿ ನಿನ್ನಲ್ಲಿದೆ. ಆದರೂ ಕೊನೆಯದಾಗಿ ಒಂದು ಮಾತು. ಅವಳನ್ನ ಮತುಬಿಡು ಮಗ. ಮಾತು ಮುಗಿಸುವಷ್ಟರಲ್ಲಿ ವಾತ್ಸಲ್ಯಳ ಕಣ್ಗಳಲ್ಲಿ ಕಣ್ಣೀರು ತುಂಬಿಕೊಡಿತು. ಕಣ್ಣೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ ಮಗನ ಮುಖವನ್ನೇ ನೋಡುತ್ತಾ ಕುಳಿತುಬಿಟ್ಟರು.

ರಾಜಶೇಖರ್ ದೊಡ್ಡ ಶ್ರೀಮಂತ ಮಾತ್ರ ಅಂದುಕೊಂಡಿದ್ದೆ. ಆದರೆ, ಅವನೊಬ್ಬ ದೊಡ್ಡ ಅಯೋಗ್ಯ ಅಂತ ಈಗ ಗೊತ್ತಾಯ್ತು.

ಸಮಸ್ಯೆ ಸೃಷ್ಟಿಯಾಗಿರೋದು ನನ್ನಿಂದ. ನನ್ನೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳೋದನ್ನ ಬಿಟ್ಟು ಮನೆ ತನಕ ಯಾಕೆ ಬಬೇಕಿತ್ತು? ಅವನು ಏನೋ ಹೇಳಿ ಹೋದ ಅಂತ ನೀನ್ಯಾಕೆ ಚಿಂತೆ ಮಾಡ್ತಾ ಇದ್ದೀಯ? ಸದ್ಯದಲ್ಲಿಯೇ ಎಲ್ಲಾ ಸಮಸ್ಯೆ ಬಗೆ ಹರಿಯುತ್ತೆ. ಯಾವುದಕ್ಕೂ ಒಂದ್ಸಲ ನಾಳೆ ಮೈಸೂರಿಗೆ ಹೋಗಿ ಅಕ್ಷರಳನ್ನ ಕಂಡು ಮಾತಾಡಿ ಬತೇನೆ ರಾಜಶೇಖರ್ ಬಗ್ಗೆ ಮನದೊಳಗೆ ಇಟ್ಟುಕೊಂಡಿದ್ದ ಅಭಿಮಾನವನ್ನು ಕಳಚಿಟ್ಟು ಕಿಡಿಕಾರಿದ.

ಅಂದ್ರೆ, ನಿನ್ನ ಮಾತಿನ ಅರ್ಥ? ಅವಳನ್ನ ಬಿಡೋದಿಲ್ಲ ಅಂದಂಗಾಯ್ತು. ನನ್ನ ಬದುಕೇ ಹಾಳಾಗೋಯ್ತು. ಬಾಲ್ಯದಲ್ಲಿ ನೆಮ್ಮದಿ ಅನ್ನೋದನ್ನ ಕಂಡಿಲ್ಲ. ಮದ್ವೆಯಾದ ನಂತರನೂ ಅದೇ ಮುಂದುವರೆಯಿತು. ಈಗ ವಯಸ್ಸಾದ ಕಾಲದಲ್ಲೂ ನೆಮ್ಮದಿ ಇಲ್ಲ ಅಂದರೆ ಆ ದೇವರಿಗೆ ನನ್ನ ಮೇಲೆ ಎಷ್ಟೊಂದು ಸಿಟ್ಟಿಬೇಡ? ವಾತ್ಸಲ್ಯ ಗೋಳಾಡುತ್ತಲೇ ಇದ್ದರು. ಅಭಿಮನ್ಯುವಿಗೆ ಅಮ್ಮನನ್ನು ಸಂತೈಸಬೇಕೆಂದು ಅನ್ನಿಸಲಿಲ್ಲ.

ಇಲ್ಲ. ಇನ್ನು ನನ್ನಿಂದ ಸಹಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಬದುಕಿನ ನೆಮ್ಮದಿ ಕೆಡಿಸುತ್ತಿರುವ ರಾಜಶೇಖರ್‌ನನ್ನೇ ಮುಗಿಸಿ ಬಿಟ್ಟರೆ ಎಲ್ಲಾ ಸರಿಹೋಗುತ್ತೆ. ಅದಕ್ಕಾಗಿ ಒಂದು ಮುಹೂರ್ತ ನಿಗದಿ ಮಾಡಬೇಕೆಂದು ದೀರ್ಘವಾಗಿ ಆಲೋಚಿಸಿದ. ಕೊಲ್ಲುವುದಾದರೂ ಹೇಗೆ? ಒಂದ್ವೇಳೆ ಕೊಲೆ ಮಾಡಿದ ವಿಚಾರ ಬಹಿರಂಗಗೊಂಡರೆ? ಎಲ್ಲರ ಬದುಕು ಕೂಡ ಹಾಳೇ. ಯಾರಿಗೂ ಗೊತ್ತಾಗದ ಹಾಗೆ ಕೊಲೆ ಮಾಡ್ಬೇಕು. ಆ ಮನುಷ್ಯ ನಗರದ ಕಡೆಗೆ ಕಾಲಿಡುವುದೇ ಅಪರೂಪ. ಇರುವ ಸಮಯವನ್ನೆಲ್ಲ ತೋಟದಲ್ಲಿ ಕಾರ್ಮಿಕರೊಂದಿಗೆ ಕಳೆದು ಬಿಡುತ್ತಾನೆ. ನಗರಕ್ಕೆ ಬರೋದೇನಿದ್ದರೂ ಹಗಲಿನ ಹೊತ್ತಿನಲ್ಲಿ ಮಾತ್ರ. ರಾತ್ರಿಯಾದೊಡನೆ ಮನೆ ಸೇರಿಕೊಳ್ಳುತ್ತಾನೆ. ಇನ್ನು ಕೊಲೆ ಮಾಡುವುದಕ್ಕೆ ಕಾಫಿ ಎಸ್ಟೇಟ್‌ವೊಂದು ಮಾತ್ರ ಸೂಕ್ತವಾದ ಸ್ಥಳ. ಆದರೆ, ಕಾಫಿ ಎಸ್ಟೇಟ್‌ನೊಳಗೆ ಕಾಲಿಡುವಾಗ ಕಾರ್ಮಿಕರ ಕಣ್ಣಿಗೆ ಬಿದ್ದರೆ? ಅವರಿಗೆ ಏನೂಂತ ಉತ್ತರ ಕೊಡೋದಕ್ಕೆ ಸಾಧ್ಯ? ಎಂದು ಕೊಲೆ ಸಂಚು ರೂಪಿಸುವುದರಲ್ಲಿ ನಿರತನಾಗಿದ್ದ ಅಭಿಮನ್ಯು ಸ್ವಲ್ಪ ಹೊತ್ತು ಕಳೆದ ನಂತರ ಸಂಪೂರ್ಣ ಬದಲಾಗಿ ಛೇ, ಒಂದು ಸಣ್ಣ ವಿಚಾರಕ್ಕೆ ಕೊಲೆ ಮಾಡ್ಬೇಕಾ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ.

ಈ ಪ್ರೀತಿ ಅಂದರೆ ಹೀಗೇನಾ? ಎಲ್ಲವನ್ನು ಮರೆಸಿ ಬಿಡುವ ತಾಕತ್ತು ಅದಕ್ಕಿದೆಯ? ಪ್ರೀತಿಯನ್ನು ದಕ್ಕಿಸಿಕೊಳ್ಳಲು ಇಂತಹ  ಒಂದು ಮಾರ್ಗ ತುಳಿಯಬೇಕಾ? ತಿಳಿಯದಾಯಿತು. ಪ್ರೀತಿಗಾಗಿ ರಾಜಶೇಖರ್‌ನನ್ನು ಬಲಿ ತೆಗೆದುಕೊಂಡು ಆ ಬಲಿ ಪೀಠದಲ್ಲಿ ಪ್ರೀತಿ ಅರೋಳೋದು ಬೇಡ. ಹಾಗೊಂದ್ವೇಳೆ ಏನಾದರು ಆಗೋದ್ರೆ ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿ ಆಕೆ ನನ್ನೊಂದಿಗೆ ಬರಲು ಹೇಗೆ ತಾನೆ ಮನಸ್ಸು ಮಾಡೋದಕ್ಕೆ ಸಾಧ್ಯ? ಸುಮ್ಮನಿದ್ದು ಬಿಡ್ಲ? ನಾನು ಹೀಗೆ ಮೌನಿಯಾಗಿ ಕುಳಿತರೆ ರಾಜಶೇಖರ್ ನನ್ನ ಮೌನವನ್ನೇ ದೌರ್ಬಲ್ಯವೆಂದು ತಿಳಿದರೆ? ಪರಿಸ್ಥಿತಿ ಕೈ ಮೀರಿ ನನ್ನ ಹತ್ಯೆಯೇ ನಡೆದು ಹೋದರೆ? ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ಅಕ್ಷರ ಅನಾಥೆಯಾಗಿ ಬಿಡ್ತಾಳಲ್ಲ? ಅವಳಿಗೆ ಇನ್ಯಾರು ದಿಕ್ಕು? ಅವಳಿಗೆ ಎಲ್ಲವನ್ನು ಮರೆತು ಮತ್ತೊಬ್ಬನೊಂದಿಗೆ ಜೀವನ ನಡೆಸೋದಕ್ಕೆ  ಸಾಧ್ಯವಿಲ್ಲ ಎಂದು ಮನದಲ್ಲಿಯೇ ಅಂದುಕೊಂಡು ಒಂದೆರಡು ಕ್ಷಣ ಕಳೆಯಲಿಲ್ಲ. ಅಷ್ಟರೊಳಗೆ ಅವನ ಮನದೊಳಗೆ ಅದಕ್ಕೆ ತದ್ವಿರುದ್ಧವಾದ ಚಿಂತನೆ ಮೊಳಕೆಯೊಡೆದು ನಿಂತಿತು. ಯಾರಿಗೆ ಗೊತ್ತು? ಎಲ್ಲವನ್ನು ಮರೆತು ಇನ್ನೊಬ್ಬನೊಂದಿಗೆ ಬದುಕು ನಡೆಸಬಹುದೇನೋ!? ಈಗಿನ ಕಾಲದ ಹುಡುಗಿಯರನ್ನ ನಂಬೋದಕ್ಕೆ ಆಗುತ್ತಾ? ಎಂದು ಮನದೊಳಗೆ ಪ್ರಶ್ನಿಸಿಕೊಂಡ.

ಜೀವನ ಅನ್ನೋದು ನಿಂತ ನೀರಲ್ಲ. ಅದು ಹರಿಯುವ ನದಿ ಇದ್ದಂತೆ. ಸದಾ ಹರಿಯುತ್ತಲೇ ಇರುತ್ತದೆ. ಕಟ್ಟ ಕಡೆಯ ಸಮುದ್ರವನ್ನು ಸೇರುವ ತನಕ. ಅಲ್ಲಿ ಪಾಪ, ಪುಣ್ಯಗಳೆಲ್ಲವೂ ವಿಲೀನಗೊಳ್ಳುತ್ತದೆ. ಸಮುದ್ರ ಪಾಪ, ಪುಣ್ಯಗಳೆಲ್ಲವನ್ನೂ ತನ್ನೊಡಲಲ್ಲಿ ಇಟ್ಟುಕೊಳ್ಳುವಂತೆ ಅಕ್ಷರ ಎಲ್ಲವನ್ನು ಮರೆತು ಕಡೇಪಕ್ಷ ಎಲ್ಲವನ್ನೂ ಮರೆತಂತೆ ನಟಿಸಿ ಬೇರೊಬ್ಬನೊಂದಿಗೆ ನೆಮ್ಮದಿಯ ಬದುಕಿಗೆ ಮದುವೆ ಎಂಬ ಮುನ್ನುಡಿ ಬರೆಯೋದಿಲ್ಲ ಎಂಬುದುಕ್ಕೆ ಯಾವುದೇ ಖಾತ್ರಿ ಇಲ್ಲ. ಆದರೆ, ನನ್ನನ್ನೇ ನಂಬಿ ಜೀವನ ಸಾಗಿಸುತ್ತಿರುವ, ನನಗೋಸ್ಕರ ಜೀವವನ್ನೇ ಮುಡಿಪಾಗಿಟ್ಟು ಬದುಕುತ್ತಿರುವ ಅಮ್ಮನ ಗತಿಯೇನು? ಆಕೆಯನ್ನು ಯಾರು ನೋಡಿಕೊಳ್ಳುತ್ತಾರೆ? ಇಷ್ಟು ದಿನ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳಲು, ಆಕೆಗೊಂದು ನೆಮ್ಮದಿಯ ಬದುಕು ಕಟ್ಟಿಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಸತ್ತು ಹೋದರೆ ಎಲ್ಲರಿಗಿಂತ ದುಃಖಿತಳಾಗುವುದು ಆಕೆ ತಾನೇ? ಅಂದಿತು ಅಭಿಮನ್ಯುವಿನ ಒಳಮನಸ್ಸು. ಇಲ್ಲ. ಅಂತಹ ಒಂದು ಪರಿಸ್ಥಿತಿಯನ್ನು ಕಲ್ಪನೆ ಮಾಡಿಕೊಳ್ಳೋದಕ್ಕೂ ನನ್ನಿಂದ ಸಾಧ್ಯವಿಲ್ಲ. ಎಲ್ಲವನ್ನು ಜಯಿಸಲೇಬೇಕು. ಅಷ್ಟೊಂದು ಆಳವಾಗಿ, ಇನ್ನೇನು ಬದುಕೇ ಮುಗಿದು ಹೋಯಿತೆಂಬ ಚಿಂತೆಯಲ್ಲಿ ಮುಳುಗಲು ನನಗೇನಾಗಿದೆ? ಅಷ್ಟಕ್ಕೂ ರಾಜಶೇಖರ್‌ಗೆ ನನ್ನ ಏನು ಮಾಡೋದಕ್ಕೆ ಸಾಧ್ಯವಿಲ್ಲ. ಒಂದಷ್ಟು ಬೆದರಿಸಬಹುದು. ಬೆದರಿಸಲಿ, ಅದಕ್ಕೆ ನಾನೇಕೆ ಅಂಜಬೇಕು? ಕಡೆಪಕ್ಷ ಒಂದೆರಡು ಏಟು ಕೊಟ್ಟು ಬುದ್ಧಿವಾದ ಹೇಳಬಹುದು. ಪ್ರೀತಿಗೋಸ್ಕರ ಅಷ್ಟನ್ನೂ ಸಹಿಸಿಕೊಳ್ಳೋದಕ್ಕೆ ನನ್ನಿಂದ ಸಾಧ್ಯ ಇಲ್ವ? ಖಂಡಿತ ಇದೆ. ಇಂದಿಗೂ ಅಂತಹ ಒಂದು ಆತ್ಮಸ್ಥೈರ್ಯ ನನ್ನಲ್ಲಿದೆ.  ಈಗ ನನಗಿಂತ ಆತಂಕ ಪಟ್ಟುಕೊಳ್ಳಬೇಕಾಗಿರುವುದು ಅಗರ್ಭ ಶ್ರೀಮಂತ ರಾಜಶೇಖರ್ ಒಬ್ಬ ಮಾತ್ರ. ಅವನಲ್ಲಿ ನನಗಿಂತ ಆತಂಕ ಮನೆ ಮಾಡಿಕೊಂಡಿದೆ. ಮಾಡಿಕೊಂಡಿರಲೇ ಬೇಕು. ಯಾಕೆಂದರೆ ಪರಿಸ್ಥಿತಿಯೇ ಹಾಗೆ ಇದೆಯಲ್ಲ. ಏನೇ ಆದರೂ ನನೊಬ್ಬ ಗಂಡಸು. ಒಂದೆಡೆ ಕೆಸರು ತುಳಿದರೆ ಮತ್ತೊಂದೆಡೆ ತೊಳೆದುಕೊಳ್ಳಬಹುದು. ಆದರೆ, ಅಕ್ಷರಳ ಬದುಕಿನಲ್ಲಿ ಹಾಗಾಗಲು ಸಾಧ್ಯವೇ? ನಮ್ಮಿಬ್ಬರ ಪ್ರೀತಿ ಬಯಲಾದರೆ ಆಕೆಯನ್ನು ಮದುವೆಯಾಗಲು ಯಾರು ತಾನೆ ಮುಂದೆ ಬರುತ್ತಾರೆ? ಸಮಾಜ ಆಕೆಯ ಬಗ್ಗೆ ನೂರಾರು ತರ ಮಾತಾಡಿಕೊಳ್ಳಲು ಪ್ರಾರಂಭಿಸುತ್ತದೆ. ಅದನ್ನೆಲ್ಲ ಅರಗಿಸಿಕೊಳ್ಳುವ ಶಕ್ತಿ ರಾಜಶೇಖರ್‌ಗೆ ಎಲ್ಲಿದೆ? ಯಾವುದೇ ಅಪ್ಪ, ಅಮ್ಮ ತನ್ನ ಮಗಳ ಬದುಕನ್ನು ಬಲಿಕೊಡಲು ಇಷ್ಟಪಡೋದಿಲ್ಲ. ಈ ಒಂದು ಕಾರಣಕ್ಕೆ ಆತ ತನ್ನ ಮೈ ಮುಟ್ಟುವ ಸಾಹಸಕ್ಕೆ ಮುಂದಾಗುವುದಿಲ್ಲ. ಮಗಳಿಗಲ್ಲದೆ ಇದ್ದರೂ ಕುಟುಂಬದ ಗೌರವ ಕಾಪಾಡುವುದಕ್ಕೋಸ್ಕರವಾದರೂ ನಮ್ಮಿಬ್ಬರ ಪ್ರೀತಿಯ ವಿಚಾರದಲ್ಲಿ ಸಂಯಮದಿಂದ ವರ್ತಿಸುತ್ತಾನೆ. ಒಂದ್ವೇಳೆ ಸಂಯಮದ ಕಟ್ಟೆ ಹೊಡೆದು ಹೋದರೆ ನನ್ನ ರಕ್ಷಣೆಗೆ ಹೇಗಿದ್ದರೂ ಸ್ನೇಹಿತರು ಇದ್ದೇ ಇದ್ದಾರಲ್ಲ. ಭಯ ಇನ್ನೇಕೆ ನನ್ನಲ್ಲಿ? ಭಯ ಪಡಬೇಕಾಗಿರುವುದು ನಾನಲ್ಲ ಮತ್ತೆ ಮತ್ತೆ ಅಂದುಕೊಂಡು ತನಗೆ ತಾನೇ ಧೈರ್ಯ ಹೇಳಿಕೊಂಡ.

ಹಣದ ಅಹಂಕಾರದಲ್ಲಿ ಮೆರೆಯುತ್ತಿರುವ ರಾಜಶೇಖರ್‌ಗೆ ಸರಿಯಾದ ಬುದ್ಧಿ ಕಲಿಸಬೇಕು. ಅಭಿಮನ್ಯು ಅಂದರೆ ಜೀವನ ಪರ್ಯಂತ ಆತ ನೆನೆಸಿಕೊಳ್ಳಬೇಕು. ಆತನ ಶ್ರೀಮಂತಿಕೆಯ ದರ್ಪ ಇಳಿಸಲು ಅಕ್ಷರಳನ್ನ ಮದುವೆಯಾಗಲೇ ಬೇಕು. ರಾಜಶೇಖರ್‌ನ ದರ್ಪ ಇಳಿಸಿದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ ಅಂದುಕೊಂಡ ಅಭಿಮನ್ಯುವಿನ ಮನಸ್ಸಿನಲ್ಲಿ ಸ್ವಲ್ಪ ಹೊತ್ತು ಕಳೆದ ನಂತರ ಬೇರೊಂದು ಆಲೋಚನೆ ಮೊಳಕೆಯೊಡೆಯಲು ಪ್ರಾರಂಭಿಸಿತು. ಯಾರಿಗೋಸ್ಕರ, ಯಾವ ಸುಖಕೋಸ್ಕರ, ಯಾವ ಉದ್ದೇಶಕೋಸ್ಕರ ಮತ್ತೊಬ್ಬರ ನೆಮ್ಮದಿ ಕೆಡಿಸಬೇಕು? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ತಬ್ಬಿಬಾದ. ನನ್ಗೆ ಬೇಕಾಗಿರೋದು ಅಕ್ಷರ ಮಾತ್ರ. ಅವಳೊಬ್ಬಳು ಸಿಕ್ಕರೆ ಅಷ್ಟೇ ಸಾಕು. ಅವಳನ್ನ ಪಡೆದುಕೊಳ್ಳುವ ಧಾವಾಂತದಲ್ಲಿ ಮತ್ತೊಬ್ಬರ ನೆಮ್ಮದಿಯ ಬದುಕಿಗೆ ಕಲ್ಲೆಸೆಯುವ ದುರ್ಬುದ್ಧಿ ಯಾಕೆ ನನ್ನ ಮನದೊಳಗೆ ಆಗಿಂದಾಗೆ ಮೊಳಕೆಯೊಡೆಯುತ್ತಿದೆ? ಯಾಕೆ ನನ್ಗೆ ಹೀಗೆಲ್ಲ ಅನ್ನಿಸ್ತಾ ಇದೆ? ಏನೋ ಕಳೆದುಕೊಳ್ಳುತ್ತೇನೆಂಬ ಎಂಬ ಭಯನಾ? ಅದು ನನ್ನ ಜೀವದಂತಿರುವ ಅಕ್ಷರಳನ್ನ? ದೇವರೇ ಹಾಗೇನು ಆಗದಿರಲಿ. ಅಕ್ಷರ ನನಗಾಗಿ ಹುಟ್ಟಿದವಳು. ಅವಳು ನನಗೆ ಮಾತ್ರ ದಕ್ಕಬೇಕು. ಅದಕ್ಕಾಗಿ ತಾನು ಯಾವ ತ್ಯಾಗಕ್ಕೂ ಸಿದ್ಧ ಎಂದು ನಿರ್ಧರಿಸಿದ. ರಾತ್ರಿ ಪೂರಾ ಚಿಂತೆಯಲ್ಲಿ ಮುಳುಗಿದ. ಯಾವುದು ಸರಿ? ಯಾವುದು ತಪ್ಪು? ಎಂದು ನಿರ್ಧರಿಸಲು ಸಾಧ್ಯವಾಗದೆ ತೊಯ್ದಾಟದಲ್ಲಿ ಸಿಲುಕಿದ.

ರಾತ್ರಿ ಮಲಗಿದ್ದಲ್ಲೇ ಮುಂದಿನ ಜೀವನದ ಬಗ್ಗೆ ನೂರಾರು ಕಲ್ಪನೆಗಳು ಮನದಲ್ಲಿ  ಮೊಳಕೆಯೊಡೆಯಿತು. ಒಂದಷ್ಟು ಸಂತೋಷ, ಒಂದಷ್ಟು ದುಃಖ, ಒಂದಷ್ಟು ಆತಂಕ ಆಗಿಂದಾಗೆ ಸಾಗರದ ಅಲೆಗಳಂತೆ ಬಂದು ಮನದಂಗಳದಲ್ಲಿ ಅಪ್ಪಳಿಸಲು ಪ್ರಾರಂಭಿಸಿತು. ಅಭಿಮನ್ಯುವಿಗೆ ನಿದ್ರೆ ಬರುವಷ್ಟರಲ್ಲಿ ತಡರಾತ್ರಿಯಾಗಿತ್ತು. ಆಕೆಯ ಕನವರಿಕೆಯಲ್ಲಿಯೇ ಮಲಗಿದ ಅಭಿಮನ್ಯು ವಿಗೆ ಬೆಳಗ್ಗೆ ಅಲ್ರಾಂ ಬಡಿದುಕೊಂಡಾಗಲೇ ಎಚ್ಚರವಾಗಿದ್ದು.

ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು ಶುಚಿಯಾದ ಅಭಿಮನ್ಯು ಅಮ್ಮನಿಗೊಂದು ಮಾತು ಕೂಡ ಹೇಳದೆ ಮನೆಯಿಂದ ಹೊರ ಬಿದ್ದ. ಮೈಸೂರಿನಲ್ಲಿ ಇನಿಯನ ಹಾದಿ ಕಾಯುತ್ತಾ ಅಕ್ಷರ ಸಮಯ ದೂಡುತ್ತಿದ್ದಳು. ಇಬ್ಬರು ಕುಳಿತು ಚರ್ಚಿಸಿ ಗಂಭೀರವಾದ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲದೆ ಇದ್ದರೂ ಪ್ರಸ್ತುತ ಎದುರಾಗಿರುವ ಆತಂಕ ದೂರ ಮಡಿಕೊಳ್ಳಲು ಅಭಿಮನ್ಯುವನ್ನು ಭೇಟಿಯಾಗಿ ಮನತುಂಬ ಮಾತಾಡಬೇಕೆಂದು ಅನ್ನಿಸಿ ಹಟಮಾಡಿ ಅಭಿಮನ್ಯುವನ್ನು ಮೈಸೂರಿಗೆ ಬರುವಂತೆ ಮಾಡಿದಳು.

ಮೂರು ತಾಸು ಪಯಣದ ನಂತರ ಬಸ್ ಮೈಸೂರು ತಲುಪಿತು. ಬಸ್ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದ ಅಕ್ಷರ ಅಭಿಮನ್ಯು ವನ್ನು ಕಂಡೊಡನೆ ಮುಗುಳ್ನಗೆ ಬೀರಿದಳು. ಅಭಿಮನ್ಯು ಪ್ರತಿಯಾಗಿ ಮುಗುಳ್ನಗೆ ಬೀರಿದ. ಇಬ್ಬರು ಒಬ್ಬರನ್ನೊಬ್ಬರು ಆಲಂಗಿ ಸಿಕೊಂಡರು. ಬಸ್ ನಿಲ್ದಾಣದಿಂದ ಕಾಲ್ತೆಗೆದು ರಿಕ್ಷಾ ಏರಿ ಹೋಟೆಲ್‌ವೊಂದರಲ್ಲಿ ಕಾಫಿ ಹೀರುತ್ತಾ ಮಾತುಕತೆಗೆ ಕುಳಿತರು.

ಯಾಕೋ ತುಂಬಾ ಒಂಟಿತನ ಕಾಡ್ತಾ ಇದೆ. ಅಪ್ಪ, ಅಮ್ಮ ನನ್ನೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯಿಂದ ಮತ್ತಷ್ಟು ಒಂಟಿತನ ಕಾಡೋದಕ್ಕೆ ಶುರುವಾಗಿದೆ. ಬದುಕೇ ನರಕ ಯಾತನೆ ಅನ್ನಿಸೋದಕ್ಕೆ ಪ್ರಾರಂಭವಾಗಿದೆ. ಚಿಂತೆ ಆವರಿಸಿಕೊಂಡಾಗಲೆಲ್ಲ ಆತ್ಮಹತ್ಯೆ ಮಾಡ್ಕೋಬೇಕು ಅನ್ನಿಸ್ತದೆ. ಮನೆಯವರು ನನ್ನೊಂದಿಗೆ ಮುನಿಸಿಕೊಂಡಲ್ಲಿಂದ ಮನಸ್ಸು ಚಿಂತೆಯಲ್ಲಿ ಮುಳುಗಿ ಹೋಗಿದೆ. ನಿನ್ನೊಂದಿಗೆ ಒಂದಷ್ಟು ಹೊತ್ತು ಮಾತಾಡಿ ಮನಸ್ಸು ಹಗುರ ಮಾಡಿಕೊಳ್ಬೇಕೂಂತ ಅನ್ನಿಸಿತು. ಅದಕೋಸ್ಕರ ಬರಮಾಡ್ಕೊಂಡೆ.

ಅಕ್ಷರ, ನೀನು ಸಾಯೋ ನಿರ್ಧಾರಕ್ಕೆ ಬಂದು ಬಿಟ್ಟಿದ್ದೀಯ? ನನ್ಗಂತೂ ಸಾಯೋ ಆಸೆಯಿಲ್ಲ. ಇನ್ನೊಂದಷ್ಟು ವರ್ಷ ಸಂತೋಷವಾಗಿ ಬದುಕಬೇಕೆಂಬ ಆಸೆ ಈ ಕ್ಷಣದವರೆಗೂ ಜೀವಂತವಾಗಿದೆ. ನಿನ್ಗೆ ಸಾಯಬೇಕು ಅನ್ನಿಸಿದರೆ ಹಾಗೆ ಮಾಡು. ಆದರೆ, ಒಂದು ಮಾತು. ನನ್ನ ಹೆಸರು ಮಾತ್ರ ಎಲ್ಲಿಯೂ ಬರೆದಿಡ್ಬೇಡ. ಹಾಗೊಂದ್ವೇಳೆ ಏನಾದ್ರು ಮಾಡಿದ್ರೆ ನನ್ಗೆ ತುಂಬಾ ಕಷ್ಟ ಆಗುತ್ತೆ. ಏನಂತಿಯ? ಆ ದುಃಖದ ವಾತಾವರಣದಲ್ಲಿಯೂ ಕೂಡ ಅವಳನ್ನು ರೇಗಿಸಿದ.

ನಿನ್ಗೆ ಯಾವತ್ತೂ ನನ್ನ ಗೇಲಿಮಾಡಿ ಸಂತೋಷ ಪಡೋದೇ ಒಂದು ಕೆಲ್ಸ. ಮನೆಯಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಅಂತ ನಿನ್ಗೇನಾದ್ರೂ ಗೊತ್ತಾ? ಮದ್ವೆ, ಮದ್ವೆ ಅಂತ ಒಂದೇ ಸಮನೆ ತಲೆ ತಿಂತಾ‌ಇದ್ದಾರೆ. ನೀನು ನೋಡಿದ್ರೆ ಸಣ್ಣ ಮಕ್ಕಳ ತರ ಆಟ ಆಡ್ತಾ ಇದ್ದೀಯ. ಹೀಗಾದ್ರೆ ಹೇಗೆ? ಯಾವತ್ತಾದರು ಒಂದೇ ಒಂದು ದಿನ ನೀನು ನಮ್ಮ ಪ್ರೀತಿಯ ಬಗ್ಗೆ ಗಂಭೀರ ವಾಗಿ ಆಲೋಚನೆ ಮಾಡಿದ್ದು ಉಂಟಾ? ಮಾಡೋದಿಲ್ಲ ಬಿಡು. ಎಷ್ಟೇ ಆದ್ರೂ ನೀನೊಬ್ಬ ಗಂಡು ಜಾತಿ ತಾನೆ. ಹೆಣ್ಮಕ್ಕಳ ಕಷ್ಟ ನಿನ್ಗೆಲ್ಲಿ ಅರ್ಥವಾಗ್ಬೇಕು ಹೇಳು? ಎಲ್ಲಾ ಸಂದರ್ಭದಲ್ಲಿಯೂ ಲಘುವಾಗಿಯೇ ಮಾತಾಡುವ ಅಭಿಮನ್ಯುವಿನ ವರ್ತನೆ ಕಂಡು ಸಿಡುಕಿದಳು.

ಕೆಲವು ದಿನಗಳಿಂದ ಅಕ್ಷರ ಸಾಕಷ್ಟು ಬದಲಾಗಿ ಹೋಗಿದಳು. ಮೊದಲಿನಂತೆ ಮೊಗದಲ್ಲಿ ಲವಲವಿಕೆ ಇಲ್ಲ. ಜೀವನದಲ್ಲಿ ಮೊದಲಿದ್ದ ಭರವಸೆಗಳೆಲ್ಲ ಬರಿದಾಗಿ ಹೋಗಿದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರೂ ಅದು ಆಕೆಯಿಂದ ಸಾಧ್ಯವಾಗುತ್ತಿಲ್ಲ. ಆಕೆಯ ಕುರಿತು ಯಾರಾದರು ಒಂದಿಷ್ಟು ತಮಾಷೆ ಮಾಡಿದರೂ ಅವಳಿಗೆ ವಿಪರೀತ ಕೋಪಬಂದು ರೇಗಾಡುತ್ತಿದ್ದಳು. ಮನಸ್ಸಿಗೆ ಬಂದಷ್ಟು ಬೈದು ಕೋಪವನ್ನು ತಣಿಸಿಕೊಳ್ಳುತ್ತಿದ್ದಳು. ಒಂದಷ್ಟು ಹೊತ್ತು ಕಳೆದ ನಂತರ ಯಾಕೆ ನಾನು ರೇಗಾಡಿದೆ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ದುಃಖ ಪಡುತ್ತಿದ್ದಳು. ಪ್ರೀತಿ ಕೈ ಜಾರಿ ಹೋಗುತ್ತದೆ ಎಂಬ ಭಯದಲ್ಲಿ ಆಕೆಯಲ್ಲಿ ಹತಾಶೆ ಮನೆ ಮಾಡಿಕೊಂಡಿದೆ. ಒಮೊಮ್ಮೆ ಆತ್ಮಹತ್ಯೆ ಹಾದಿ ತುಳಿದು ಬಿಡುವ ಅನ್ನಿಸಿದಾಗ ಅಭಿಮನ್ಯುವನ್ನು ನೆನೆದು ಸುಮ್ಮನಾಗಿ ಬಿಡುತ್ತಾಳೆ. ಆಕೆಗೆ ಈಗ ಜೀವನದಲ್ಲಿ ಒಂದಷ್ಟು ಭರವಸೆಗಳನ್ನು ತುಂಬುವವರು ಬೇಕು. ಅದು ಅಭಿಮನ್ಯುವಿನಿಂದ ಮಾತ್ರ ದೊರೆಯಲು ಸಾಧ್ಯ. ಆದರೆ, ಅಭಿಮನ್ಯುವಿನಲ್ಲಿ ಇನ್ನೂ ತುಂಟಾಟ ಮಾಯವಾಗದೆ ಇರುವು ದನ್ನು ಕಂಡು ಮತ್ತಷ್ಟು ಕಳವಳಕ್ಕೆ ಒಳಗಾದಳು.

ಅಭಿ, ನೀನು ಹೀಗೆ ತಮಾಷೆ ಆಡ್ತಾ ಇದ್ರೆ ಒಂದೆರಡು ತಿಂಗಳೊಳಗೆ ನನ್ನ ಮದ್ವೆ ಮುಗಿದು ಹೋಗಿರುತ್ತೆ. ಈಗ ಯಾವುದಾರೊಂದು ನಿರ್ಧಾರ ಕೈಗೊಳ್ಳಲೇ ಬೇಕು. ದಯವಿಟ್ಟು ಸಹಕಾರ ಮಾಡು ವಿನಂತಿಸಿದಳು.

ಎಲ್ಲಾ ವಿಚಾರಕ್ಕೂ ಆತಂಕ ಪಟ್ಟುಕೊಂಡ್ರೆ ಹೇಗೆ? ನೀನು ಮಾತಾಡಿದಾಗಲೆಲ್ಲ ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ಹೇಳೋದನ್ನ ಕೇಳಿ ನಗು ಬತಾ ಇದೆ. ಒಂದು ವಿಷಯವನ್ನಂತು ಚೆನ್ನಾಗಿ ತಿಳ್ಕೊ. ನಾವು ಸಾಯೋದಕೋಸ್ಕರ ಪ್ರೀತಿ ಮಾಡ್ತಾ ಇಲ್ಲ, ಸುಂದರ ಬದುಕು ನಡೆಸೋದಕೋಸ್ಕರ ಪ್ರೀತಿ ಮಾಡ್ತಾ ಇದ್ದೇವೆ. ಈಗ ಅಷ್ಟೊಂದು ತಲೆಬಿಸಿ ಮಾಡಿಕೊಳ್ಳುವಂತಹ ಪರಿಸ್ಥಿತಿ ಏನಾಗಿದೆ? ನಿನ್ನ ಮದ್ವೆ ಮಾಡಿಕೊಳ್ಳೋದಕ್ಕೆ ಮುಂದೆ ಬಂದಿರುವ ಹುಡುಗನಿಗೆ ಎಲ್ಲಾ ವಿಚಾರ ಹೇಳಿ ಬಿಡು. ನಿನ್ಗೆ ಹೇಳೋದಕ್ಕೆ ಕಷ್ಟ ಆಗುತ್ತೆ ಅನ್ನೋದಾದರೆ ಆ ಕೆಲಸವನ್ನ ನಾನೇ ನಿಭಾಯಿಸ್ತಿನಿ. ಕುಟುಂಬದ ಒಪ್ಪಿಗೆಯೊಂದಿಗೆ ನಡೆಯುವ ವಿವಾಹಗಳು ಯಾವತ್ತೂ ದಿಢೀರಾಗಿ ನಾಳೆನೇ ನಡೆಯೋದಿಲ್ಲ. ನಿಶ್ಚಿತಾರ್ಥ ನಡೆದು ಮದುವೆಗೊಂದು ದಿನ ಗೊತ್ತುಪಡಿಸಿ ಸಂಬಂಧಿಕರು, ಸ್ನೇಹಿತರು, ಪರಿಚಯಸ್ತರಿಗೆಲ್ಲ ಆಮಂತ್ರಣ ಕೊಡ್ಬೇಕು. ಅದಕ್ಕೊಂದಷ್ಟು ಕಾಲಾವಕಾಶ ಬೇಕೇ ಬೇಕು. ಪ್ರೇಮ ವಿವಾಹಕ್ಕೆ ಅಂತಹ ಯಾವುದೇ ಅಡೆ ತಡೆಗಳು ಇಲ್ಲ. ನೀನು ಹೂಂ ಅಂದ್ರೆ ನಾಳೆನೇ ಮದ್ವೆಯಾಗಿ ಬಿಡ್ಬೊಹುದು. ಮದ್ವೆ ಬಗ್ಗೆ ಅನಾವಶ್ಯಕ ಆತಂಕಗಳನ್ನ ತುಂಬಿಕೊಂಡು ಯಾಕೆ ಮನಸ್ಸು ಹಾಳು ಮಾಡ್ಕೊಳ್ಬೇಕು? ನೀನಂದುಕೊಂಡಂತೆ ನಿಮ್ಮ ಅಪ್ಪ, ಅಮ್ಮ ನಮ್ಮ ಮದ್ವೆ ನಡೆಸಿಕೊಡೋದಿಲ್ಲ. ನಮ್ಮ ಮದ್ವೆಗೆ ನಾಲ್ಕು ಜನ ಸೇರಿದರೆ ಅದೇ ಹೆಚ್ಚು. ಅಪ್ಪ, ಅಮ್ಮನ ಆಶೀರ್ವಾದದೊಂದಿಗೆ ಮನೆಯ ಹೊಸ್ತಿಲು ದಾಟಬೇಕೂಂತ ನಿನ್ನ ಆಸೆ. ಆದರೆ, ಅದು ಈಡೇರುವ ಮಾತಲ್ಲ. ಒಂದಷ್ಟು ಸ್ನೇಹಿತರ ಸಹಕಾರ ಪಡ್ಕೊಂಡು ಯಾವುದಾದರೊಂದು ದೇವಸ್ಥಾನದಲ್ಲಿ ಮದ್ವೆ ಮಾಡ್ಕೊಂಡ್ರಾಯ್ತು. ಇಲ್ದಿದ್ರೆ ರಿಜಿಸ್ಟರ್ ಆಫೀಸ್‌ನಲ್ಲಿ ರಿಜಿಸ್ಟಡ್ ಮ್ಯಾರೇಜ್ ಮಾಡ್ಕೊಳ್ಳುವ. ನಿನ್ಗೆ ಯಾವಗ ಮದ್ವೆ ಮಾಡ್ಕೋ ಬೇಕು ಅನ್ನಿಸ್ತದೋ ಆವಾಗ ನನ್ನೊಂದಿಗೆ ಹೊರಟು ಬಂದು ಬಿಡು. ನಮ್ಮಿಂದ ಶ್ರೀಮಂತಿಕೆಯ ಬದುಕು ನಡೆಸೋದಕ್ಕೆ ಸಾಧ್ಯವಿಲ್ಲದೆ ಇರಬಹುದು. ಆದರೆ, ಒಂದು ಸುಂದರವಾದ ಬದುಕು ನಡೆಸೋದಕ್ಕೆ ಸಾಧ್ಯವಿದೆ. ನೀನು ಯಾವುದಕ್ಕೂ ಭಯ ಪಡ್ಬೇಡ ಆಕೆಯ ಕೈ ಹಿಡಿದು ಕಣ್ಗಗಳನ್ನೇ ನೋಡುತ್ತಾ ಭರವಸೆಯ ಮಾತುಗಳನ್ನಾಡಿದ.

ಆಕೆಗೆ ಅಭಿಮನ್ಯುವಿನ ನಿರ್ಧಾರ ಸರಿ ಅನ್ನಿಸಿತು. ಮದುವೆ ವಿಚಾರದಲ್ಲಿ ಅಪ್ಪ, ಅಮ್ಮನೊಂದಿಗೆ ಗುದ್ದಾಡುವುದಕ್ಕಿಂತ ಮದುವೆಯಾಗೋದಕ್ಕೆ ಬಯಸುತ್ತಿರುವ ನಿಖಿಲ್ ಎದುರು ಎಲ್ಲಾ ವಿಚಾರ ತೆರೆದಿಟ್ಟರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನಿಖಿಲ್ ಎಷ್ಟೇ ಆದ್ರೂ ಅಮೆರಿಕದಲ್ಲಿ ನೆಲೆಸಿದವನು. ಅವನಿಗೆ ಪ್ರೀತಿ-ಪ್ರೇಮದ ವಿಚಾರ ಎಲ್ಲರಿಗಿಂತ ಚೆನ್ನಾಗಿ ಮನದಟ್ಟಾಗಬಹುದು. ಅಮ್ಮ ಫೋನ್ ಮಾಡಿದಾಗ ನಿಖಿಲ್‌ನ ಒಮ್ಮೆ ಮೈಸೂರಿಗೆ ಬಂದು ಹೋಗೋದಕ್ಕೆ ಹೇಳಿದರಾಯ್ತು. ಅವನು ನನ್ನ ನೋಡೋದಕ್ಕೆ ಬಂದೇ ಬತಾನೆ. ಆ ಸಂದರ್ಭವನ್ನ ಬಳಕೆ ಮಾಡಿಕೊಂಡರಾಯ್ತು ಎಂದು ಅಕ್ಷರ ಮನದಲ್ಲಿಯೇ ನಿರ್ಧಾರ ಕೈಗೊಂಡಳು.

ಅಭಿಮನ್ಯುವಿನ ಮಾತುಕೇಳಿ ಮನದೊಳಗೆ ಕಾಣಿಸಿಕೊಂಡ ಆತಂಕ, ನೋವು, ಆಕ್ರೋಶ ತಣ್ಣಗಾಯಿತು. ಅಭಿಮನ್ಯುವಿನ ಕಡೆಗೊಮ್ಮೆ ನೋಡಿ ತುಂಟ ನಗೆ ಬೀರಿದಳು. ಅಭಿ, ನೀನು ಪ್ರೀತಿಯ ವಿಚಾರದಲ್ಲಿ ತುಂಬಾನೇ ತಿಳ್ಕೊಂಡಿದ್ದಿಯ. ಇಲ್ದಿದ್ರೆ ನೀನು ಇಂತಹ ಪರಿಸ್ಥಿತಿಯಲ್ಲಿ ಇಷ್ಟೊಂದು ಕೂಲಾಗಿ ಇತಿಲಿಲ್ಲ. ಆದರೆ, ನಾನು ನೋಡು ಹುಚ್ಚಿ ತರ ನಿನ್ಮೇಲೆ ರೇಗಾಡ್ತಾ ಕೂತ್ಬಿಟ್ಟಿದ್ದೆ. ಸಮಾಧಾನವಾಗಿ ಕೂತ್ಕೊಂಡು ಆಲೋಚನೆ ಮಾಡಿದರೆ ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದೇ ಇದೆ ಅಲ್ವ? ಅಂದಳು. ಅಭಿಮನ್ಯು ಹೌದು ಎಂಬಂತೆ ತಲೆ ಅಲ್ಲಾಡಿಸಿ ಮುಗುಳ್ನಗೆ ಬೀರಿದ.

ಅಕ್ಷರ ದಿನವಿಡೀ ಉಲ್ಲಾಸದಲ್ಲಿ ಕಳೆದಳು. ಇನಿಯನ ಭೇಟಿ ಆಕೆಯಲ್ಲಿ ಉಲ್ಲಾಸ ತರಿಸಿತು. ಅಭಿಮನ್ಯುವನ್ನು ಮಡಿಕೇರಿಗೆ ಸಂತೋಷದಿಂದ ಬೀಳ್ಕೊಟ್ಟು ಆಗಿಂದಾಗೆ ಬತಾಹೋಗ್ತಾ ಇರು. ನನ್ಗಂತೂ ಮಡಿಕೇರಿಯಲ್ಲಿ ನಿನ್ನ ಭೇಟಿಯಾಗೋದಕ್ಕೆ ಅವಕಾಶವಿಲ್ಲ. ಅದ್ಕೆ ನೀನೇ ಇಲ್ಲಿಗೆ ಬಂದು ನನ್ನ ಬೇಟಿಯಾಗಿ ಹೋಗು. ಇಲ್ಲಿ ಎಷ್ಟು ಹೊತ್ತು ಬೇಕಾದ್ರೂ ಕೂತು ಮಾತಾಡ್ಬೊಹುದು. ಇಲ್ಲಿ ಯಾರಾದರು ನೋಡಿಬಿಡ್ತಾರೆ ಎಂಬ ಭಯ ನಮಗಿಲ್ಲ ಎಂದು ಹೇಳಿ ನಕ್ಕಳು.

ಆಯ್ತು, ನೀನಂದುಕೊಂಡಂತೆ ಆಗಲಿ ಅಂದ ಅಭಿಮನ್ಯು ಮೈಸೂರಿನಿಂದ ನಿರ್ಗಮಸಿದ. ಅಭಿಮನ್ಯು ಮಡಿಕೇರಿ ತಲುಪುವಷ್ಟರೊಳಗೆ ಇಬ್ಬರು ಮೈಸೂರಿನಲ್ಲಿ ಭೇಟಿಯಾಗಿರುವ ವಿಚಾರ ರಾಜಶೇಖರ್ ಮನೆಯವರೆಗೂ ತಲುಪಿತು. ಮೈಸೂರಿನ ಹೋಟೆಲ್‌ವೊಂದರಲ್ಲಿ ಇಬ್ಬರು ಕುಳಿತು ಆಡಿಕೊಳ್ಳುತ್ತಿದ್ದ ಪ್ರತಿಯೊಂದು ಮಾತು ಪರಿಚಿತರ ಮೂಲಕ ರಾಜಶೇಖರ್ ಕಿವಿಗೆ ಮುಟ್ಟಿತು. ಇನ್ನು ಮಗಳಿಗೆ ಕಾಲಾವಕಾಶ ನೀಡುವುದರಲ್ಲಿ ಅರ್ಥವಿಲ್ಲವೆಂದು ತಿಳಿದ ರಾಜಶೇಖರ್ ಮೈಸೂರಿಗೆ ತೆರಳಿ ಅಕ್ಷರಳನ್ನು ಬಲವಂತವಾಗಿ ಮನೆಗೆ ಕರೆತಂದರು.

ಮನೆಗೆ ಎಳೆದು ತಂದವರೇ ಮನಬಂದಂತೆ ಥಳಿಸಿದರು. ಯಾವ ಘಳಿಗೆಯಲ್ಲಿ ಹುಟ್ಟಿಬಿಟ್ಟೆಯೋ ನಮ್ಮ್ಮ ನೆಮ್ಮದಿ ಹಾಳು ಮಾಡೋದಕ್ಕೆ. ಇಲ್ಲಿ ಕದ್ದುಮುಚ್ಚಿ ಭೇಟಿಯಾಗೋದಕ್ಕೆ ಸಾಧ್ಯವಿಲ್ಲ ಅಂದುಕೊಂಡು ಮೈಸೂರಿಗೆ ನೀನೇ ವರ್ಗಾವಣೆ ಮಾಡಿಸಿ ಕೊಂಡು ಹೋಗಿ ಸರಕಾರ ವರ್ಗಾವಣೆ ಮಾಡಿಬಿಟ್ರು ಅಂಥ ಸುಳ್ಳು ಬೇರೆ ಹೇಳ್ತಾ ಇದ್ದೀಯ. ನೀವಿಬ್ರು ಮೈಸೂರಿನಲ್ಲಿ ಕದ್ದುಮುಚ್ಚಿ ಭೇಟಿಯಾದ್ರೆ ನಮ್ಗೆ ತಿಳಿಯೋದಿಲ್ಲ ಅಂದ್ಕೊಂಡಿದ್ದೀಯ? ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚನೇ ಕಾಣೋದಿಲ್ಲ ಅಂದುಕೊಳ್ಳುತ್ತದೆ. ನೀನು ಕೂಡ ಬೆಕ್ಕಿನ ತರ ಆಡ್ತಾ ಇದ್ದೀಯ. ಇಂತಹ ಬದುಕು ನಡೆಸೋದಕ್ಕಿಂತ ಎಲ್ಲಾದ್ರು ಹೋಗಿ ಸಾಯೋದಕ್ಕೇನು? ಆಕ್ರೋಶದಿಂದ ಕುದಿಯುತ್ತಿದ್ದ ರಾಜಶೇಖರ್ ಮಗಳಿಗೆ ಮನಬಂದಂತೆ ಬೈಯ್ದು ಆಕ್ರೋಶವನ್ನು ತಣಿಸಿಕೊಳ್ಳಲು ಪ್ರಯತ್ನಿಸಿದರು.

ಲೀಲಾವತಿ ಎಲ್ಲವನ್ನೂ ನೋಡುತ್ತಾ ಕಲ್ಲಾಗಿ ನಿಂತು ಬಿಟ್ಟರು. ಗಂಡನನ್ನು ಎಷ್ಟೂಂತ ಸಮಾಧಾನ ಪಡಿಸಲು ಸಾಧ್ಯ? ಮಗಳು ನಡೆದುಕೊಳ್ಳುತ್ತಿರುವ ರೀತಿನೇ ಹಾಗೆ ಇದೆ. ಇನ್ನು ಅವರಿಗೆ ಸಿಟ್ಟು ಬರದೆ ಇನ್ನೇನು ಬರಲು ಸಾಧ್ಯ? ಪ್ರೀತಿ ಮಾಡಿದ ತಪ್ಪಿಗೆ  ಅವಳು ಕೂಡ ಸ್ವಲ್ಪ ನೋವು ಅನುಭವಿಸಲಿ ಅಂದುಕೊಂಡರು.

ಮನಸೋ‌ಇಚ್ಚೆ ಥಳಿಸಿ ಆಕೆಯನ್ನು ಬಾತ್‌ರೂಂ ಕಡೆಗೆ ಎಳೆದೊಯ್ದು ತಣ್ಣೀರಿನಲ್ಲಿ ಸ್ನಾನ ಮಾಡಿ ಹೊರ ಬರುವಂತೆ ನಿರ್ದೇಶನ ನೀಡಿದರು. ಒಂದರ್ಧ ತಾಸು ತಣ್ಣೀರಿಗೆ ಮೈಯೊಡ್ಡಿ ಅತ್ತುಬಿಟ್ಟಳು. ರಾಜಶೇಖರ್ ಕೈಗಳ ಗುರುತು ಮೈ ಮೇಲೆ ಮೂಡಿದ್ದವು. ಮುಖ ಊದಿಕೊಂಡಿತು. ದೇಹ ನಿತ್ರಾಣಗೊಳ್ಳುವಷ್ಟು ಆಕೆಯ ಮೇಲೆ ಹಲ್ಲೆ ನಡೆಯಿತು. ಮೈ ಮೇಲೆ ತಣ್ಣೀರು ಸುರಿದುಕೊಂಡು ಸ್ವಲ್ಪ ನಿಟ್ಟುಸಿರು ಬಿಟ್ಟಳು. ಅಪ್ಪನಿಗೆ ಮುಖ ತೋರಿಸುವುದಕ್ಕಿಂತ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದೇ ಒಳ್ಳೆಯದೆಂದು ತಿಳಿದು ಆತ್ಮಹತ್ಯೆಗೆ ಮುಂದಾದಳು. ಆ ಕ್ಷಣದಲ್ಲಿ ಅಭಿಮನ್ಯು ನೆನಪಿಗೆ ಬಂದು ಸುಮ್ಮನಾದಳು. ಆತ್ಮಹತ್ಯೆ ಮಾಡಿಕೊಂಡರೆ ಅಭಿಮನ್ಯು ಅನಾಥನಾಗಿ ಬಿಡುತ್ತಾನಲ್ಲ? ಅವನು ಅನಾಥವಾಗಬಾರದು.

ನಾನು ಅವನಿಂದ ದೂರವಾದರೆ ಅವನ ಜೀವನ ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯ ಇಲ್ಲ ಅಂದುಕೊಂಡು ಮತ್ತೆ, ಮತ್ತೆ ಬಿಕ್ಕಳಿಸಿ ಅತ್ತು ಹೊಂದಷ್ಟು ತಣ್ಣೀರನ್ನು ತಲೆಗೆ ಸುರಿದುಕೊಂಡು ಸ್ನಾನ ಮುಗಿಸಿ ಹೊರಬಂದಳು.

ಸಿಟ್ಟಿನಿಂದ ಕುದಿಯುತ್ತಿದ್ದ ರಾಜಶೇಖರ್ ಮನೆಯೊಳಗೆ ಅತ್ತಿಂದಿತ್ತ ತಿರುಗಾಡುತ್ತಿದ್ದರು. ಒಂದೆಡೆ ಕುಳಿತುಕೊಳ್ಳುವಷ್ಟೂ ವ್ಯವಧಾನ ಇರಲಿಲ್ಲ. ಅಷ್ಟರ ಮಟ್ಟಿಗೆ ಮಗಳ ನಡೆ ಅವರಿಗೆ ಕೋಪ ತರಿಸಿತು. ಬಾತ್‌ರೂಂನಿಂದ ಹೊರ ಬಂದ ಮಗಳ ಕೈ ಹಿಡಿದುಕೊಂಡ ರಾಜಶೇಖರ್ ಜೊತೆಗೆ ಪತ್ನಿಯನ್ನೂ ಕರೆದುಕೊಂಡು ದೇವರ ಕೋಣೆಗೆ ನಡೆದರು.

ಮಗಳನ್ನು ಮನೆ ದೇವರ ಎದುರು ನಿಲ್ಲಿಸಿ ಇನ್ನು ಮುಂದೆ ಎಂದಿಗೂ ಅಭಿಮನ್ಯುವನ್ನು ಭೇಟಿಯಾಗೋದಿಲ್ಲ. ಅವನನ್ನ ಮರೆತು ಬಿಡ್ತೇನೆ ಅಂತ ದೇವರ ಮುಂದೆ ಆಣೆ ಮಾಡು. ಇಲ್ಲದಿದ್ರೆ ನಿನ್ನ ಇಲ್ಲೇ ಕೊಂದು ಬಿಡ್ತೇನೆ. ದೇವರ ಫೋಟೋದ ಎದುರು ನಿಂತು ಗುಡುಗಿದರು ರಾಜಶೇಖರ್.

ಅಪ್ಪ ಹೇಳಿದ ಹಾಗೆ ನಡೆದುಕೊಳ್ಳದೆ ಇದ್ದರೆ ಮತ್ತಷ್ಟು ಒದೆ ಬೀಳುವುದು ನಿಶ್ಚಿತ. ದೇವರಿಗೆ ನನ್ನ ಎಲ್ಲಾ ವಿಚಾರ ತಿಳಿದ್ದೇ ಇದೆ. ಅಭಿಮನ್ಯುವನ್ನು ನನ್ನವನಾಗಿಸು ದೇವರೇ ಎಂದು ದಿನಾ ಬೇಡಿಕೊಳ್ಳುತ್ತಿದ್ದ ದೇವರ ಎದುರಿನಲ್ಲಿ ಇಂದು ಇನ್ನು ಮುಂದೆ ಅಭಿಮನ್ಯುವನ್ನು ಭೇಟಿಯಾಗುವುದಿಲ್ಲ. ಅವನನ್ನ ಮರೆತು ಬಿಡ್ತೇನೆ ಎಂದು ಹೇಳುವುದಾದರೂ ಹೇಗೆ? ಅಂದುಕೊಂಡು ಭರಿಸಲಾಗದ ದುಃಖದಿಂದ ಅತ್ತುಬಿಟ್ಟಳು. ಆಕೆಯ ಅಳು ಕೇಳಿ ರಾಜಶೇಖರ್‌ಗೆ ಕರುಣೆ ಉಕ್ಕಿ ಬರಲಿಲ್ಲ. ಆಕೆ ಸುರಿಸುತ್ತಿರುವ ಪ್ರತಿ ಕಣ್ಣೀರಿನ ಹನಿಯಲ್ಲಿಯೂ ಕೂಡ ಅಭಿಮನ್ಯುವಿನ ನೆನಪಿದೆ. ಕಣ್ಣೀರು ನಿಂತಾಗ ಮಾತ್ರ ಅವಳನ್ನು ನಂಬೋದಕ್ಕೆ ಸಾಧ್ಯ ಎಂದು ಅರಿತ ರಾಜಶೇಖರ್ ಕೋಪ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗದೆ ದೇವರ ಮುಂದೆಯೇ ಕೈ ಎತ್ತಿ ಹಲ್ಲೆ ನಡೆಸಲು ಮುಂದಾದರು.

ದೇವರ ಮುಂದೆ ನಿಂತು ಮನಪೂರ್ವಕವಾಗಿ ಅಭಿಮನ್ಯುವನ್ನು ತೊರೆಯುವ ನಿರ್ಧಾರ ಪ್ರಕಟಿಸುವ ಇರಾದೆ ಆಕೆಯಲ್ಲಿ ಇಲ್ಲ. ಕೇವಲ ಅಪ್ಪನನ್ನು ಸಂತೃಪ್ತಿ ಪಡಿಸುವುದಕೋಸ್ಕರ ಇನ್ನು ಮುಂದೆ ಎಂದಿಗೂ ಅಭಿಮನ್ಯುವನ್ನು ಭೇಟಿಯಾಗೋದಿಲ್ಲ, ಮಾತಾಡೋದಿಲ್ಲ, ಅವನ ನೆರಳನ್ನು ಕೂಡ ನೋಡೋದಿಲ್ಲ. ನೀವು ನೋಡಿದ ಹುಡುಗನೊಂದಿಗೆ ಸಂಸಾರ ನಡೆಸ್ತೇನೆ ಎಂದು ಅಪ್ಪನಿಗೆ ತೃಪ್ತಿಯಾಗಲಿ ಎಂದು ಒಂದೆರಡು ಮಾತು ಹೆಚ್ಚಿಗೆ ಸೇರಿಸಿ ಆಡಿದಳು. ದೇವರ ಮುಂದೆ ಪ್ರತಿಜ್ಞೆ ಕೈಗೊಂಡ ಬಳಿಕ ಮತ್ತೆ ಕೈ ಮುಗಿದು ಎರಡನೇ ಸುತ್ತಿನ ಪ್ರಾರ್ಥನೆಯನ್ನು ತನ್ನ ಮನದೊಳಗೆ ಕೈಗೊಂಡಳು. ‘ದೇವರೇ…, ಪ್ರೀತಿಗೋಸ್ಕರ ನಿನ್ನ ಮುಂದೆ ಇಂತಹ ಒಂದು ಸುಳ್ಳಿನ ಪ್ರತಿಜ್ಞೆ ಕೈಗೊಂಡಿದ್ದೇನೆ. ದಯವಿಟ್ಟು ಕ್ಷಮಿಸಿ ಬಿಡು. ನನ್ಗೆ ನನ್ನ ಅಭಿಮನ್ಯು ಬೇಕು. ಅವನನ್ನ ನನ್ಗೆ ದೊರೆಯುವಂತೆ ಮಾಡು. ಅಭಿಮನ್ಯುವನ್ನು ಬಿಟ್ಟು ನನ್ನಿಂದ ಬದುಕೋದಕ್ಕೆ ಸಾಧ್ಯವಿಲ್ಲ. ಅಭಿಮನ್ಯುವಿನ ಪರಿಸ್ಥಿತಿ ಕೂಡ ನನಗಿಂತ ಭಿನ್ನವಾಗಿಲ್ಲ. ಇದೊಂದು ಕೋರಿಕೆಯನ್ನು ನೆರವೇರಿಸಿಕೊಡು ಎಂದು ದೇವರಲ್ಲಿ ಪ್ರಾರ್ಥಿಸಿ ಕಣ್ಗಳಿಂದ ಜಲಪಾತದಂತೆ ಹರಿದು ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಅಪ್ಪನ ಕಡೆಗೊಮ್ಮೆ ನೋಡಿ ಈಗ ನಿಮ್ಗೆ ಸಂತೃಪ್ತಿ ಆಯ್ತಾ? ಎಂದು ಆಕ್ರೋಶದಿಂದ ಕೇಳಿದಳು.

ದೇವರ ಮುಂದೆ ಪ್ರತಿಜ್ಞೆ ಮಾಡಿದ್ದೀಯ. ಇನ್ನು ಮುಂದೆ ಎಲ್ಲಾದರು ಅಭಿಮನ್ಯುವನ್ನು ಭೇಟಿಯಾದರೆ ದೇವರು ನಿನ್ನ  ಸುಮ್ನೆ ಬಿಡೋದಿಲ್ಲ. ನೀನು ಸಾಯೋದು ನಿಶ್ಚಿತ. ದೇವರ ಶಾಪ ನಿನ್ಗೆ ತಟ್ಟದೆ ಇರೋದಿಲ್ಲ ಧಾರ್ಮಿಕ ಭಕ್ತಿ ಹೆಚ್ಚಿರುವ ಅಕ್ಷರಳನ್ನು ದೇವರ ಹೆಸರಿನಲ್ಲಿ ಬೆದರಿಸಿದರು.

ಎಲ್ಲಾ ಮುಗಿತಾ ಅಥವಾ ಇನ್ನೇನಾದ್ರು ಉಂಟಾ? ಇದ್ರೆ ಹೇಳಿ ಬಿಡಿ? ಹಾಳಾದ ಹೆಣ್ಣು ಜನ್ಮ ದೇವರು ನನ್ಗೆ ಯಾಕಾದ್ರೂ ಕೊಟ್ನೋ ಎಂದು ದೇವರು ಹಾಗೂ ಜನ್ಮಕೊಟ್ಟವರನ್ನು ಶಪಿಸುತ್ತಾ ಕಣ್ಣೀರಿಡುತ್ತಲೇ ಬೆಡ್‌ರೂ ಕಡೆಗೆ ಓಡಿದಳು.

ಮಂಚದ ಮೇಲೆ ಬಿದ್ದುಕೊಂಡು ಮನಸೋ‌ಇಚ್ಚೆ ಅತ್ತುಬಿಟ್ಟಳು, ಮನಸ್ಸು ಹಗುರವಾಗುವವರೆಗೆ. ಆಕೆಯನ್ನು ಸಂತೈಸಲು ಯಾರೂ ಮುಂದಾಗಲಿಲ್ಲ. ಅವಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲಿ ಎಂಬಂತೆ ತಮ್ಮ ಪಾಡಿಗೆ ತಾವಿದ್ದರು. ಇಬ್ಬರ ಪ್ರೀತಿಯನ್ನು ಕೊನೆಗಾಣಿಸಬೇಕೆಂದು ನಿರ್ಧರಿಸಿದ ರಾಜಶೇಖರ್ ಮನದಲ್ಲಿ ಹಲವಾರು ಆಲೋಚನೆಗಳು ಹುಟ್ಟಿಕೊಂಡಿತು. ಹೇಗಾದರು ಮಾಡಿ ಅಭಿಮನ್ಯುವಿಗೆ ಅಕ್ಷರಳ ಬಗ್ಗೆ ಜಿಗುಪ್ಸೆ ಹುಟ್ಟುವ ಹಾಗೆ ಮಾಡಬೇಕು. ಅದಕ್ಕೆ ಅಕ್ಷರಳನ್ನು ಒಂದು ಅಸ್ತ್ರವಾಗಿ ಬಳಕೆ ಮಾಡಬೇಕೆಂದು ನಿರ್ಧರಿಸಿದರು. ಸ್ವಲ್ಪ ಹೊತ್ತು ಕಳೆದ ನಂತರ ನೇರವಾಗಿ ಅಕ್ಷರಳ ಬಳಿ ಹೋದ ರಾಜಶೇಖರ್, ಅಕ್ಷರ, ನೀನು ಅಭಿಮನ್ಯುವಿನ ಬಗ್ಗೆ ಯೋಚನೆ ಮಾಡ್ತಾ ಕಣ್ಣೀರು ಸುರಿಸ್ಬೇಡ. ನನ್ಗೆ ಅದನ್ನ ನೋಡೋದಕ್ಕೆ  ಇಷ್ಟ ಇಲ್ಲ. ಅಭಿಮನ್ಯುವಿಗೆ ಕೂಡ್ಲೇ ಫೋನ್ ಮಾಡಿ ‘ನೀನು ನನ್ಗೆ  ಇಷ್ಟ ಇಲ್ಲ. ನನ್ನ ಮರೆತು ನಿನ್ನ ಪಾಡಿಗೆ ನೀನು ಇದ್ದು ಬಿಡು ಅಂತ ಹೇಳ್ಬೇಕು. ಹೇಳದೆ ಹೋದ್ರೆ ಪುನಃ ಒದೆ ತಿನ್ಲಿಕ್ಕೆ ರೆಡಿಯಾಗಿರು ಎಂದು ಗದರಿಸಿದರು.

ಒಂದೆರಡು ಏಟು ಬಿದ್ದ ನಂತರ ಮಗಳು ಸಾಕಷ್ಟು ಬದಲಾಗಿ ಹೋಗಿದ್ದಾಳೆ. ಕಳೆದ ಬಾರಿ ಮನೆಗೆ ಬಂದಾಗ ಪ್ರತಿಯೊಂದು  ಮಾತಿಗೆ ಎದುರು ಮಾತನಾಡುತ್ತಿದ್ದಳು. ಮನೆಗೆ ಕಕೊಂಡು ಬಂದು ನಾಲ್ಕು ಒದ್ದಾಗ ಬಾಲ ಮುದುರಿದ ನಾಯಿ ಅಂತೆ ಆಗಿಬಿಟ್ಟಿದ್ದಾಳೆ. ಇವಳನ್ನ ಸರಿದಾರಿಗೆ ತರೋದಕ್ಕೆ ಇದೇ ಸರಿಯಾದ ಮದ್ದು ಅಂದುಕೊಂಡು ತಮ್ಮ ಕಾರ್ಯಸಾಧನೆ ಯಾಗುತ್ತಿರುವುದನ್ನು ಕಂಡು ಮನದೊಳಗೆ ಸಂತೋಷವನ್ನು ಅನುಭವಿಸತೊಡಗಿದರು.

ದೇವರ ಮುಂದೆ ನಿಂತು ಪ್ರತಿಜ್ಞೆ ಕೈಗೊಂಡು ಅಪ್ಪನನ್ನು ಸಂತೃಪ್ತಿ ಪಡಿಸಿದ್ದು ಆಯ್ತು. ಇನ್ನು ಅಭಿಮನ್ಯುವಿಗೆ ಒಂದಷ್ಟು ಬೈದು ಸಂತೃಪ್ತಿ ಪಡಿಸೋದೊಂದು ಬಾಕಿ ಇದೆ. ಅದು ಒಂದು ಆಗಿ ಹೋಗಲಿ ಅಂದುಕೊಂಡ ಅಕ್ಷರ ಅಭಿಮನ್ಯುವಿಗೆ ಫೋನಾಯಿಸಿದಳು.

ಅಭಿಮನ್ಯು, ನಿನ್ನ ನಾನು ಪ್ರೀತಿ ಮಾಡಿ ಜೀವನದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ. ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ತಾ ಇದ್ದೇನೆ. ಇನ್ನಾದರೂ ನನ್ನ ಜೀವನದಲ್ಲಿ ಆಟವಾಡುವುದನ್ನು ನಿಲ್ಲಿಸಿ ನನ್ನ ಪಾಡಿಗೆ ನನ್ನ ಬಿಟ್ಟು ಬಿಡು. ನಿನ್ನ ಪ್ರೀತಿ ಮಾಡಿದ್ದು ನನ್ನ ತಪ್ಪು. ಅದಕೋಸ್ಕರ ನಿನ್ನಲ್ಲಿ ಕ್ಷಮೆ ಕೇಳ್ತಾ ಇದ್ದೇನೆ. ಆದರೆ, ಇನ್ನು ಮುಂದೆ ನನ್ನ ಜೀವನದಲ್ಲಿ ಕಾಲಿಡೋದಕ್ಕೆ ಪ್ರಯತ್ನ ಮಾಡ್ಬೇಡ ಎಂದಷ್ಟೇ ಹೇಳಿ ಫೋನಿಟ್ಟು ಗೊಳೋ ಎಂದು ಅಳಲು ಪ್ರಾರಂಭಿಸಿದಳು.

ಆಡಿದ ಮಾತುಗಳೆಲ್ಲವೂ ಮನಪೂರ್ವಕವಾಗಿರಲಿಲ್ಲ. ಎಲ್ಲವೂ ರಾಜಶೇಖರ್‌ನನ್ನು ಸಂತೃಪ್ತಿ ಪಡಿಸಲು ಆಡಿದ ಮಾತು ಗಳಾಗಿದ್ದವು. ಆ ಸತ್ಯದ ಅರಿವು ಆಕೆಗೆ ಮಾತ್ರ ಗೊತ್ತು. ಒಂದೇ ಉಸಿರಿನಲ್ಲಿ ಎಲ್ಲಾ ಹೇಳಿ ಮುಗಿಸಿದ ಅಕ್ಷರಳ ಮಾತು ಕೇಳಿ ಅಭಿಮನ್ಯುವಿಗೆ ಬರಸಿಡಿಲು ಬಡಿದಂತಾಯಿತು. ಇಷ್ಟೊಂದು ವರ್ಷ ಜೋಪಾನವಾಗಿ ಕಾಯ್ದುಕೊಂಡು ಬಂದ ಪ್ರೀತಿಯನ್ನು ಏಕಾ‌ಏಕಿ ತಿರಸ್ಕಾರ ಮಾಡುವ ಮಾತು ಕೇಳಿ ಕಂಗಾಲಾದ.

ಈ ಹಾಳಾದ ಹುಡುಗಿಯರ ಬುದ್ಧಿಯೇ ಇಷ್ಟು. ಇರುವಷ್ಟು ದಿನ ಚೆನ್ನಾಗಿ ಇತಾರೆ. ಒಳ್ಳೆಯ ಹುಡುಗ ಸಿಕ್ಕ ಮೇಲೆ ಕಸದ ಬುಟ್ಟಿಗೆ ಕಸ ಎಸೆಯುವಂತೆ  ಪ್ರೀತಿಯನ್ನೂ ಎಸೆದು ಬಿಡುತ್ತಾರೆ. ಮೊನ್ನೆ ಮೊನ್ನೆ ತನಕವೂ ಇದ್ದ ಪ್ರೀತಿ ಇಂದು ಇಲ್ಲ ಅಂದರೆ ಆಕೆಯ ಮನಸ್ಸು ಎಷ್ಟೊಂದು ಕಠೋರವಾಗಿರಬೇಡ? ಅಂತಹವಳನ್ನು ಪ್ರೀತಿಸಿ ನಾನು ಪಡೆಯಬೇಕಾಗಿರುವುದಾದರೂ ಏನು? ಅನ್ನಿಸಿತು.

ರಾಜಶೇಖರ್‌ಗೆ ಮಗಳ ಮಾತು ಕೇಳಿ ಇನ್ನಿಲ್ಲದ ಸಂತೋಷ ತರಿಸಿತು. ಅವರಿಗೂ ಕೂಡ ಗೊತ್ತು ಮಗಳು ಆಡಿದ ಮಾತು ಮನಪೂರ್ವಕವಾಗಿಲ್ಲ ಎಂದು. ಆದರೆ, ಮಗಳು ಆಡಿದ ಮಾತು ಕೇಳಿ ಅಭಿಮನ್ಯು ತಲ್ಲಣಗೊಂಡು ಆಕೆಯನ್ನು ತಿರಸ್ಕಾರ ಮಾಡುತ್ತಾನೆ ಎಂಬ ವಿಚಾರ ಅವರ ಸಂತೋಷಕ್ಕೆ ಕಾರಣವಾಯಿತು. ಆ ಸಂತೋಷದಲ್ಲಿ ಸಿಗರೇಟ್ ಹಚ್ಚಿಕೊಂಡು ಗೆಲುವಿನ ನಗೆಯೊಂದಿಗೆ ಹೊಗೆಯನ್ನು ಸುರುಳಿ ಸುರುಳಿಯಾಗಿ ಬಿಡುವ ಪ್ರಯತ್ನ ಮಾಡುತ್ತಿದ್ದರು.

ಮಗಳು ನಾನಂದುಕೊಂಡದಕ್ಕಿಂತ ಚೆನ್ನಾಗಿಯೇ ಅಭಿಮನ್ಯುವಿಗೆ ಪ್ರೀತಿಯನ್ನು ತಿರಸ್ಕರಿಸುವ ವಿಷಯ ಮನಮುಟ್ಟುವಂತೆ ಹೇಳಿ ಮುಗಿಸಿದ್ದಾಳೆ ಅಂದುಕೊಂಡ ರಾಜಶೇಖರ್ ತುಟಿಯಲ್ಲಿ ಗೆಲುವಿನ ಕಿರುನಗೆ ಬೀರಿತು.

ಎಲ್ಲವನ್ನು ಜಯಿಸಿದ ಸಂತೋಷದಲ್ಲಿದ್ದ ರಾಜಶೇಖರ್ ನಂದಕುಮಾರ್‌ಗೆ ಫೋನಾಯಿಸಿ ನಾಳೆ ಬೆಳಗ್ಗೆ ಮನೆಗೆ ಹೆಣ್ಣು ನೋಡೋದಕ್ಕೆ ಬರುವಂತೆ ಬರಮಾಡಿಕೊಂಡರು. ಮಗಳು ಮದ್ವೆಗೆ ಒಪ್ಪಿಕೊಂಡಿದ್ದಾಳೆ. ಮಗನ ಕಕೊಂಡು ಬಂದ್ಬಿಡು ಅಂದ ರಾಜಶೇಖರ್ ಮಗಳ ಒಪ್ಪಿಗೆ ಪಡೆಯದೆಯೇ ಮದುವೆ ಮಾಡಿಸುವ ನಿರ್ಧಾರ ಕೈಗೊಂಡರು.

ಬೆಡ್‌ರೂಂನಲ್ಲಿ ಮಲಗಿದ್ದ ಮಗಳ ಬಳಿ ಹೋದ ರಾಜಶೇಖರ್, ನಾಳೆ ನಿನ್ನ ನೋಡೋದಕ್ಕೆ ಹುಡುಗ ಬತಾ ಇದ್ದಾನೆ. ಬಾಯಿ ಮುಚ್ಕೊಂಡು ಒಪ್ಕೋ ಬೇಕು. ನಾಳೆ ಏನಾದ್ರು ತಕರಾರು ಎತ್ತಿದ್ರೆ. ನಿನ್ನ ಇಲ್ಲೇ ಕೊಂದು ಹೂತಾಕಿ ಬಿಡ್ತಿನಿ. ಎಂದು ಗದರಿಸಿದರು. ಅಕ್ಷರ ಯಾವುದೇ ಪ್ರತಿಕ್ರಿಯೆ ನೀಡದೆ ಅಭಿಮನ್ಯುವನ್ನು ನೆನೆಯುತ್ತಾ ಕಣ್ಣೀರು ಸುರಿಸುತ್ತಿದ್ದಳು. ‘ತಾನಾಡಿದ ಮಾತು ಕೇಳಿ ಅಭಿಮನ್ಯು ಏನಂದುಕೊಂಡಿರುತ್ತಾನೋ ಏನೋ? ಮನಸ್ಸಿಗೆ ನೋವಾಗಿ ಏನಾದ್ರು ಮಾಡ್ಕೊಂಡು ಬಿಟ್ರೆ!? ದೇವರೇ ಹಾಗೇನು ಆಗದಿರಲಿ. ಆದಷ್ಟು ಬೇಗ ನನ್ನ ಈ ನರಕದಿಂದ ಮುಕ್ತಿಗೊಳಿಸಿ ಬಿಡು ಎಂದು ಪ್ರಾರ್ಥಿಸಿಕೊಂಡಳು.
*  *  *

ತುಂಬಾ ಉತ್ಸಾಹದಿಂದ ಮರುದಿನ ಬೆಳಗ್ಗಿನ ಜಾವ ಮನೆಗೆ ಹೆಂಡತಿ, ಮಗನೊಂದಿಗೆ ಆಗಮಿಸಿದರು ನಂದಕುಮಾರ್. ಅಕ್ಷರಳನ್ನು ಕಂಡು ತುಂಬಾ ಸಂತೋಷಗೊಂಡರು. ಇಂತಹ ಒಳ್ಳೆಯ ಹುಡುಗಿ ನಮ್ಮ ಮನೆಯ ಸೊಸೆಯಾಗಿ ಬತಾ ಇರೋದು ನಮ್ಮ ಸೌಭಾಗ್ಯ ಎಂದು ಮುಕ್ತಕಂಠದಿಂದ ಹೊಗಳಿದರು.

ಏನು ಸೌಭಾಗ್ಯನೋ ಏನೋ… ಎಂದು ಮನದಲ್ಲಿ ಅಂದುಕೊಂಡರು ರಾಜಶೇಖರ್.

ಅಕ್ಷರ, ಅಂದಹಾಗೆ ನಿನ್ಗೆ ಈ ಮದ್ವೆಗೆ ಒಪ್ಪಿಗೆ ಇದೆಯ? ಔಪಚಾರಿಕವಾಗಿ ಕೇಳಿದರು ನಂದಕುಮಾರ್.

ನನ್ಗೆ ಈ ಮದ್ವೆಗೆ ಒಪ್ಪಿಗೆ ಇದೆ. ನನ್ಗಿಂತ ಹೆಚ್ಚಾಗಿ ಅಪ್ಪನಿಗೆ ನಿಮ್ಮ ಸಂಬಂಧ ಬೆಳೆಸಬೇಕೂಂತ ಆಸೆ. ಅಪ್ಪನ ಆಸೆಗೆ ತಣ್ಣೀರು ಎರಚೋದಕ್ಕೆ ನನ್ಗೆ ಇಷ್ಟ ಇಲ್ಲ. ಮುಂದಿನ ವಿಚಾರ ಏನಿದ್ದರೂ ಅಪ್ಪನೊಂದಿಗೆ ಮಾತಾಡಿ ಮುಗಿಸಿಕೊಳ್ಳಿ. ಅಕ್ಷರ ಮುಖ ಊದಿಸಿಕೊಂಡು ಆಡಿದ ಮಾತು ಕೇಳಿದ ನಂದಕುಮಾರ್, ರಾಜಶೇಖರ್ ಕಡೆಗೆ ತಿರುಗಿ, ರಾಜು, ಯಾಕೋ ನಿನ್ನ ಮಗಳಿಗೆ ಈ ಮದ್ವೆ ಇಷ್ಟ ಇಲ್ಲ ಅಂತ ಕಾಣುತ್ತೆ. ಕೋಪದಲ್ಲಿ ಇದ್ದಾಳೆ…?

ಹಾಗೇನು ಇಲ್ಲ ನಂದ, ನಿನ್ನೆ ತಾನೇ ಮನೆಗೆ ಬಂದಿದ್ದಾಳೆ. ಬಸ್‌ನಲ್ಲಿ ಬಂದದಕ್ಕೆ ಸ್ವಲ್ಪ ಸುಸ್ತಾಗಿದೆ. ಅದಕ್ಕೆ ಅವಳಿಗೆ ಮಾತಾಡೋ ಉತ್ಸಾಹ ಇಲ್ಲ. ಆಯಾಸವಾದಾಗ ಅವಳನ್ನ ಯಾರಾದ್ರು ಮಾತಾಡಿಸಿದ್ರೆ ಅವಳು ಮುಖ ಊದಿಸಿಕೊಂಡೇ ಉತ್ತರ ಕೊಡ್ತಾಳೆ. ಅದು ಅವಳು ಸಣ್ಣ ವಯಸ್ಸಿನಿಂದಲೂ ರೂಢಿಸಿಕೊಂಡು ಬಂದಿರುವ ಬುದ್ಧಿ. ನಂದಕುಮಾರ್ ಮಗನಿಗೆ ನಿನ್ನ ಕೊಟ್ಟು ಮದ್ವೆ ಮಾಡ್ತಾ ಇದ್ದೀವಿ ಅಂದ ಕ್ಷಣ ಅವಳಿಗಾದ ಸಂತೋಷ ಅಷ್ಟಿಷ್ಟಲ್ಲ. ಅದಕೋಸ್ಕರ ಕಚೇರಿಗೆ ರಜೆ ಹಾಕಿ ಬಂದಿದ್ದಾಳೆ. ಈಗ ನಿಮ್ಮ ಮುಂದೆ ಮಾತಾಡೋದಕ್ಕೆ ನಾಚಿಕೆ ಪಟ್ಕೊಂಡು ತಲೆ ತಗ್ಗಿಸಿ ನಿಂತಿದ್ದಾಳೆ ನೋಡಿ ನಂದಕುಮಾರ್ ಮನದಲ್ಲಿ ಕವಿದಿದ್ದ ಸಂಶಯ ದೂರ ಮಾಡಲು ತೇಪೆಹಾಕುವ ಕೆಲಸ ಮಾಡಿ ಮುಗಿಸಿದರು.

ಈಗಿನ ಕಾಲದಲ್ಲೂ ಕೂಡ ಹೆಣ್ಮಕ್ಕಳು ನಾಚ್ಕೋತ್ತಾರೆ ಅಂದ್ರೆ ತುಂಬಾ ಆಶ್ಚರ್ಯವಾಗುತ್ತೆ. ನಮ್ಗೆ ಹುಡ್ಗಿ ಒಪ್ಪಿಗೆ ಆಗಿದ್ದಾಳೆ. ನಿಖಿಲ್‌ಗೂ ಕೂಡ ಹುಡ್ಗಿ ಇಷ್ಟವಾಗಿದ್ದಾಳೆ. ಮುಂದಿನ ತಿಂಗಳು ನಿಶ್ಚಿತಾರ್ಥ ಇಟ್ಟುಕೊಳ್ಳುವ ಮದುವೆಗೆ ಮುನ್ನುಡಿ ಬರೆದರು ನಂದಕುಮಾರ್.

ಆಯ್ತು, ನೀವಂದುಕೊಂಡಂತೆ ಆಗಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ರಾಜಶೇಖರ್ ಕೂಡ ಮದುವೆಗೆ ತಮ್ಮ ಸಮ್ಮತ್ತಿ ಸೂಚಿಸಿದರು.

ರಾಜು, ನಿನ್ನ ಮಗಳೊಟ್ಟಿಗೆ ಫ್ರೀಯಾಗಿ ಮಾತಾಡ್ಬೇಕೂಂತ ನಿಖಿಲ್ ಆಸೆ ಪಡ್ತಾ ಇದ್ದಾನೆ. ಅವರಿಬ್ಬರನ್ನ ಹೊರಗೆ ಕಳುಹಿಸಿಕೊಡ್ಬೊಹುದಾ? ವಿನಯವಾಗಿ ಕೇಳಿಕೊಂಡರು ನಂದಕುಮಾರ್.

ಆಯ್ತು, ಅದ್ಕೇನಂತೆ. ಇಬ್ರು ನಾಳೆದಿನ ಮದ್ವೆಯಾಗೋರು. ಮುಂದಿನ ಜೀವನ ಸುಗಮವಾಗಿ ಸಾಗಿಸೋದಕ್ಕೆ ಪರಸ್ಪರ ಮಾತಾಡ್ಕೊಂಡು ಬಲಿ ಅಂದ ರಾಜಶೇಖರ್ ಮಗಳ ಕಡೆಗೆ ತಿರುಗಿ ಅಕ್ಷರ, ನಿಖಿಲ್ ಜೊತೆ ಒಂದ್ಸಲ ಟೌನ್‌ಗೆ ಹೋಗಿ ಬಾ, ನಾವಿಲ್ಲಿ ಮಾತಾಡ್ಕೊಂಡು ಕೂತಿತಿವಿ ಅಂದರು.

ಅಕ್ಷರ ಮರು ಮಾತಾಡದೆ ನಿಖಿಲ್‌ನೊಂದಿಗೆ ನಡೆದಳು. ಕಾರು ತೋಟದ ಹಾದಿ ಕ್ರಮಿಸಿ ರಾಜಾಸೀಟ್ ಕಡೆಗೆ ಪಯಣ ಬೆಳೆಸಿತು. ಎಲ್ಲಿಗೆ ಕಕೊಂಡೋಗ್ತಾ ಇದ್ದೀಯ? ಯಾಕೆ ಕಕೊಂಡೋಗ್ತಾ ಇದ್ದೀಯ? ಎಂದು ಒಂದೇ ಒಂದು ಪ್ರಶ್ನೆಯನ್ನೂ ಕೂಡ ಆಕೆ ಕೇಳಲಿಲ್ಲ. ಆತನೊಂದಿಗೆ ಮಾತಾಡುವುದಕ್ಕೇನಿದೆ ಅಂದುಕೊಂಡಳು. ನಿಖಿಲ್ ಕೂಡ ಮಾತಾಡುವ ಧೈರ್ಯ ತೋರಲಿಲ್ಲ.

ರಾಜಾಸೀಟ್ ಉದ್ಯಾನವನ ಪ್ರವೇಶಿಸುತ್ತಿದ್ದಂತೆ ಅಭಿಮನ್ಯುವಿನ ನೆನಪಾಗಿ ತಾನು ತಪ್ಪು ಮಾಡುತ್ತಿದ್ದೇನೆ ಎಂದು ತಿಳಿದ ಅಕ್ಷರಳ ಮೊಗದಲ್ಲಿ ಬೆವರ ಹನಿಗಳು ಮೂಡಿದವು. ಆಕೆಯಲ್ಲಿ ಪಾಪ ಪ್ರಜ್ಞೆ ಕಾಡಲು ಪ್ರಾರಂಭ ವಾಯಿತು. ಇಷ್ಟುದಿನ ಅಭಿಮನ್ಯುವಿನ ತೋಳಿನಲ್ಲಿ ಬಂಧಿಯಾಗಿರುತ್ತಿದ್ದ ಜಾಗದಲ್ಲಿ ಇಂದು ಗೊತ್ತುಗುರಿ ಇಲ್ಲದವನೊಂದಿಗೆ ಬಂದು ನಿಂತಿದ್ದೇನಲ್ಲ. ಇದು ಒಂದು ಜನ್ಮನಾ? ಅನ್ನಿಸಿತು. ಮತ್ತೆ ಸುಧಾರಿಸಿಕೊಂಡು ಇಲ್ಲ, ನಾನು ಅಭಿಮನ್ಯುವಿಗೆ ಮೋಸ ಮಾಡ್ತಾ ಇಲ್ಲ. ನನ್ನ ಪ್ರತಿಯೊಂದು ಹೆಜ್ಜೆಯೂ ಕೂಡ ನಮ್ಮಿಬ್ಬರ ಒಳಿತಿಗೋಸ್ಕರನೇ ತುಳಿಯುತ್ತಿದ್ದೇನೆ. ಅಪ್ಪನ ಮನಗೆದ್ದು ಆದಷ್ಟು ಬೇಗ ಮೈಸೂರು ಸೇರಿಕೊಂಡು ಅಲ್ಲೇ ಅಭಿಮನ್ಯುವನ್ನು ವಿವಾಹ ಮಾಡಿಕೊಳ್ಬೇಕು ಎಂದು ಮನದಲ್ಲೇ ನಿರ್ಧಾರ ಕೈಗೊಂಡಳು.

ರಾಜಾಸೀಟ್ ಒಳಗೆ ಕಾಲಿಟ್ಟ ತಕ್ಷಣ ನಿಖಿಲ್ ಅಕ್ಷರಳ ಕೈ ಹಿಡಿದುಕೊಂಡು ಅಕ್ಷರ, ನಾನು ನಿನ್ನ ತುಂಬಾ ಪ್ರೀತಿಸ್ತಾ ಇದ್ದೇನೆ. ನೀನು ನನ್ಗೆ ಸಿಕ್ಕಿರೋದು ನಾನು ಹೋದ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಇಬೇಕು. ಅಂದಹಾಗೆ ನೀನು ಯಾಕೆ ಡಲ್ಲಾಗಿದ್ದೀಯ? ಮೈಗೆ ಹುಷಾರಿಲ್ವ? ಅಥವಾ ನನ್ನೊಂದಿಗೆ ಮಾತಾಡೋದಕ್ಕೆ ಇಷ್ಟವಿಲ್ವ?

ನಿಖಿಲ್ ಹಿಡಿದುಕೊಂಡಿದ್ದ ಕೈಯನ್ನು ಬಿಡಿಸಿಕೊಂಡ ಅಕ್ಷರ ಕೆಲವೊಂದು ಸಲ ಮಾತಾಡುವುದಕ್ಕಿಂತ ಮೌನವಾಗಿರುವುದೇ ವಾಸಿ. ನನ್ಗೆ ನಿನ್ನ ಮದ್ವೆಯಾಗೋದಕ್ಕೆ ತುಂಬಾ ಇಷ್ಟ ಇದೆ. ಆದರೆ, ನನ್ಗೆ ಈಗಲೇ ಮದ್ವೆ ಮಾಡಿಕೊಳ್ಳೋದಕ್ಕೆ ಇಷ್ಟ ಇಲ್ಲ. ನನ್ನ ಮೇಲೆ ನಿನ್ಗೆ ನಿಜವಾದ ಪ್ರೀತಿ ಇದ್ದರೆ ನನ್ಗೆ ಒಂದು ವರ್ಷ ಕಾಲಾವಕಾಶ ಮಾಡಿಕೊಡು. ಒಂದು ವರ್ಷ ಕಳೆದ ನಂತರ ಮದ್ವೆಯಾಗಿ ಹಾಯಾಗಿರುವ. ಅಲ್ಲಿ ತನಕ ನೀನು ನನ್ನ ನೋಡೋದಕ್ಕೆ, ಮಾತಾಡೋದಕ್ಕೆ ಪ್ರಯತ್ನ ಮಾಡ್ಬೇಡ. ನನ್ಗೆ ಒಂದು ವರ್ಷ ಒಬ್ಬೊಂಟಿಯಾಗಿ ಇಬೇಕು ಅನ್ನಿಸ್ತಾ ಇದೆ ಅಂದ ಆಕೆಯ ಮಾತಿನಲ್ಲಿ ಒಂದು ವರ್ಷ ಕಾಲಾವಕಾಶ ಸಿಕ್ಕರೆ ಅಭಿಮನ್ಯುವಿನೊಂದಿಗೆ ಮದುವೆಯಾಗಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬಹುದೆಂಬ ಚಿಂತನೆ ಅಡಗಿತ್ತು. ಅದಕೋಸ್ಕರ ಮಾತಿನಲ್ಲಿ ಪ್ರೀತಿಯ ಲೇಪನ ಹಚ್ಚಿ ನಿಖಿಲ್‌ನ ಮನವೊಲಿಸಿ ತಾನಂದುಕೊಂಡ ಕಾರ್ಯ ಈಡೇರಿಸಲು ಪ್ರಯತ್ನಿಸಿದಳು. ಆದರೆ, ಆಕೆಯ ಮಾತು, ನಡೆದುಕೊಳ್ಳುತ್ತಿರುವ ರೀತಿ ನೋಡಿ ನಿಖಿಲ್ ಸಂಶಯಗೊಂಡ.

ಒಂದು ವರ್ಷ ಕಾಲಾವಕಾಶ ಬೇಕೂಂತ ಮನೆಯಲ್ಲಿ ಎಲ್ಲರ ಎದುರೇ ಕೇಳಬಹುದಿತ್ತಲ್ಲ?  ಎಂದು ಪ್ರಶ್ನಿಸಿದ ನಿಖಿಲ್ ಆಕೆ ನೀಡುವ ಉತ್ತರ ಆಲಿಸಲು ಆಕೆಯನ್ನು ಕುತೂಹಲದಿಂದ ನೋಡಿದ.

ಕೇಳ್ಬೊಹುದಿತ್ತು. ಆದರೆ, ಹೇಗೆ ಕೇಳ್ಬೇಕೂಂತ ನನ್ಗೆ ತೋಚುತ್ತಿಲ್ಲ. ನಿನ್ನೊಂದಿಗೆ ಮದ್ವೆ ಮಾಡಿಸೋದಕ್ಕೆ ಅಪ್ಪ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ನಾನು ಒಂದು ವರ್ಷ ಮದ್ವೆ ಮುಂದೂಡುವ ಮಾತು ಆಡಿದರೆ ಅವರು ತುಂಬಾ ನೊಂದು ಕೊಳ್ಳುತ್ತಾರೆ. ನೀನು ಹೇಗಾದ್ರು ಮಾಡಿ ಮನವೊಲಿಸಬೇಕು. ‘ನನ್ಗೆ ಅಮೆರಿಕದಲ್ಲಿ ಸಾಕಷ್ಟು ಕೆಲಸ ಇದೆ. ಒಂದು ವರ್ಷ ಕಳೆದ ನಂತರ ಮದ್ವೆಯಾಗ್ತೇನೆ ಅಂತ ನೀನು ಹೇಳಿದರೆ ಎಲ್ಲರೂ ಖಂಡಿತ ಒಪ್ಪಿಕೊಳ್ತಾರೆ ಅಂದ ಅಕ್ಷರ ಉತ್ತರಕ್ಕಾಗಿ ನಿಖಿಲ್ ಮೊಗವನ್ನು ಕಾತುರದಿಂದ ನೋಡಿದಳು.

ಮದುವೆಯ ಗುಂಗಿನಲ್ಲಿದ್ದ ನಿಖಿಲ್‌ಗೆ ಅಕ್ಷರಳ ಮಾತು ಸ್ವಲ್ಪ ಬೇಸರ ತರಿಸಿತ್ತಾದರೂ ಸುಧಾರಿಸಿಕೊಂಡ. ನನ್ನ ಮದುವೆ ಯಾಗಬೇಕೆಂದು ನಿರ್ಧಾರ ಕೈಗೊಂಡಿರುವವಳ ಸಣ್ಣ ಕೋರಿಕೆ ಈಡೇರಿಸದಿದ್ದರೆ ಅವಳು ನನ್ನ ಬಗ್ಗೆ ಏನಂದುಕೊಳ್ತಾಳೋ ಏನೋ? ಎಂದು ಆಕೆಗೋಸ್ಕರ ಒಂದು ಸಣ್ಣ ಸುಳ್ಳು ಹೇಳಿ ಮನೆಯವರನ್ನು ಒಪ್ಪಿಸುವ ನಿರ್ಧಾರಕ್ಕೆ ಬಂದ.

ಅಕ್ಷರ, ನೀನೇನು ಚಿಂತೆ ಮಾಡ್ಬೇಡ. ನಿನ್ಗೆ ಒಂದು ವರ್ಷ ಹಾಯಾಗಿರೋದಕ್ಕೆ ಅವಕಾಶ ಮಾಡಿಕೊಡುವ ಜವಾಬ್ದಾರಿ ನಂದು ಎಂದು ನಿಖಿಲ್ ಆಕೆಯೆಡೆಗೆ ನೋಡಿ ಈಗ ಸಂತೋಷವಾಯ್ತಾ? ಕೇಳಿದ.

ಕೇವಲ ಸಂತೋಷ ಮಾತ್ರ ಅಲ್ಲ. ಹಾಲು ಕುಡಿದಷ್ಟು ಸಂತೋಷವಾಗ್ತಾ ಇದೆ ಅಂದ ಅಕ್ಷರ ನಿಖಿಲ್ ನನ್ನೊಂದಿಗೆ ನಿನ್ಗೆ ಇನ್ನೇನಾದರು ಮಾತಾಡೋದಕ್ಕೆ ಇದೆಯಾ? ಇಲ್ಲದಿದ್ದರೆ ಹೊರಡುವ ತನ್ನ ಪಾಲಿನ ಕೆಲಸ ಮುಗಿದ ಸಂತೋಷದಲ್ಲಿ ಮನೆಗೆ ಹಿಂತಿರುಗಲು ನಿರ್ಧರಿಸಿದಳು.

ಯಾಕೆ ಅಷ್ಟೊಂದು ಅವಸರ? ಇದೇ ಪ್ರಥಮ ಬಾರಿಗೆ ಭೇಟಿಯಾಗಿದ್ದೇವೆ. ಒಂದಷ್ಟು ಹೊತ್ತು ಇಲ್ಲೇ ಕೂತು ಮಾತಾಡಿ ಹೋಗುವ. ಮನೆಗೆ ಹೋದರೆ ಎಲ್ಲರ ಮುಂದೆ ತಲೆ ಎತ್ತಿ ನಿನ್ನ ಮುಖ ಸಹ ನೋಡೋದಕ್ಕೆ ಅವಕಾಶ ಸಿಗೋದಿಲ್ಲ. ದಯವಿಟ್ಟು ಅರ್ಧತಾಸು ಇಲ್ಲೇ ಕಳೆಯುವ ವಿನಂತಿಸಿಕೊಂಡ.

ಇಲ್ಲಿ ಹೆಚ್ಚು ಹೊತ್ತು ಕೂತು ಮಾತಾಡೋದಕ್ಕೆ ನನ್ಗೆ ಇಷ್ಟ ಇಲ್ಲ. ಎಲ್ಲರು ಬಂದು ಹೋಗುವ ಜಾಗ ಇದು. ನಾಲ್ಕಾರು ಜನ ನೋಡಿದ್ರೆ ಏನಂದುಕೊಳ್ಳುತ್ತಾರೋ ಏನೋ?

ಏನು ಬೇಕಾದ್ರೂ ಅಂದುಕೊಳ್ಳಲಿ. ಅದಕ್ಕೆ ನೀನೇಕೆ ಬೇಸರ ಮಾಡ್ಕೋಬೇಕು? ನಾಳೆ ದಿನ ನಾವಿಬ್ರು ಮದ್ವೆಯಾಗುವವರು. ಇವತ್ತು ನಾವಿಲ್ಲಿ ಕೂತಿರೋದನ್ನ ನೋಡಿದ ಜನ ಲವ್ವಸ್ ಅಂಥ ತಿಳ್ಕೊಂಡಿರಬಹುದು. ಅದರಲ್ಲಿ ತಪ್ಪೇನಿದೆ? ನಾನು ನಿನ್ನ ಪ್ರೀತಿ ಮಾಡ್ತಾ ಇದ್ದೇನೆ. ನೀನು ಕೂಡ ನನ್ನ ಪ್ರೀತಿ ಮಾಡ್ತಾ ಇದ್ದೀಯ. ಹೀಗಿರುವಾಗ ಭಯ ಯಾಕೆ!?

ಹಾಗಂತ ನಾನೇನು ಅಂದ್ಕೊಂಡಿಲ್ಲ. ನೀನು ಕಲ್ಪನೆ ಮಾಡ್ಕೊಂಡಿದ್ದೀಯ ಅಷ್ಟೆ. ಅಪ್ಪ ಹೇಳಿದಕ್ಕೆ ನಿನ್ನೊಂದಿಗೆ ಬಂದಿದ್ದೇನೆ ಅಷ್ಟೆ. ಮದ್ವೆಯಾದ ನಂತರ ಮಾತ್ರ ನಿನ್ನ ಹೆಂಡ್ತಿಯಾಗೋದಕ್ಕೆ ಸಾಧ್ಯ. ಅಲ್ಲಿ ತನ್ಕ ಯಾವುದೇ ಸಂಬಂಧ ಕಲ್ಪಿಸಿಕೊಳ್ಳೋದಕ್ಕೆ ಮುಂದಾಗ್ಬೇಡ. ಅದು ನನ್ಗೆ ಇಷ್ಟ ಇಲ್ಲ. ಅದ್ಕೆ ನಾನು ಹೇಳಿದ್ದು, ಆದಷ್ಟು ಬೇಗ ಇಲ್ಲಿಂದ ಹೊರಡುವ ಅಂತ ಆಕೆಯ ಮಾತು ಕೇಳಿ ನಿಖಿಲ್‌ಗೆ ಇರುಸುಮುರಿಸಾಯಿತು. ಆದರೆ, ಆಕೆಗೆ ಅದು ಅನಿವಾರ್ಯ. ಎಲ್ಲಾದರು ಅಭಿಮನ್ಯು ಅಥವಾ ಅವನ ಸ್ನೇಹಿತರು ನಿಖಿಲ್‌ನೊಂದಿಗೆ ಇರುವುದನ್ನು ನೋಡಿದರೆ ಇನ್ನು ಜೀವನದಲ್ಲಿ ಎಂದಿಗೂ ಕೂಡ ಅಭಿಮನ್ಯು ತನ್ನನ್ನು ಸ್ವೀಕಾರ ಮಾಡಿಕೊಳ್ಳುವುದಿಲ್ಲ. ಯಾರ ಕಣ್ಣಿಗೆ ಕಾಣದಂತೆ ಆದಷ್ಟು ಬೇಗ ಮನೆ ಸೇರಿಕೊಳ್ಳಬೇಕೆಂಬ ನಿರ್ಧಾರ ಆಕೆಯದ್ದು. ರಾಜಾಸೀಟ್‌ನಲ್ಲಿ ಕಳೆದಷ್ಟು ಹೊತ್ತನ್ನು ಸುತ್ತಲಿನ ಪರಿಸರದಲ್ಲಿ ಯಾರಾದರೂ ಪರಿಚಿತರು ಇದ್ದಾರೆಯೇ? ಎಂದು ಹುಡುಕುವು ದರಲ್ಲಿ ಕಳೆದಳು.

ಅಕ್ಷರ, ನಿನ್ಗೆ ಇಲ್ಲಿ ಇರೋದಕ್ಕೆ ಬೇಸರ ಆಗ್ತಾ ಇದೆ ಅನ್ನೋದಾದ್ರೆ ಹೊರಡುವ ಎಂದು ನಿಖಿಲ್ ಆಕೆಯನ್ನು ಮನೆ ಕಡೆಗೆ ಕರೆದೊಯ್ದ. ಮನೆಯಲ್ಲಿ ಸಂಭ್ರಮದ ವಾತಾವರಣ ಎದ್ದು ಕಾಣುತಿತ್ತು. ಎಲ್ಲರಿಗಿಂತ ಹೆಚ್ಚಾಗಿ ರಾಜಶೇಖರ್ ತುಂಬಾ ಉಲ್ಲಾಸಿತರಾಗಿದ್ದರು. ಮೊಗದಲ್ಲಿ ಗೆಲುವಿನ ನಗೆ ಇತ್ತು. ಏನೇ ಆದರೂ ಕೊನೆಗೂ ಮಗಳು ಮದುವೆಗೆ ಒಪ್ಪಿಕೊಂಡಳಲ್ಲಾ ಎಂಬ ಸಂತೋಷ ಭಾರವಾಗಿದ್ದ ಅವರ ಮನಸ್ಸನ್ನು ಹಗುರಗೊಳಿಸಿತು. ಸಮಾಜದ ಎದುರು ತಲೆತಗ್ಗಿಸಿ ನಿಲ್ಲುವ ಪ್ರಸಂಗ ತಪ್ಪಿತು. ಆದಷ್ಟು ಬೇಗ ಮದುವೆಯ ದಿನ ಬಂದು ಬಿಡಲಿ ಎಂಬ ಕಾತುರ ಅವರ ಮೊಗದಲ್ಲಿ ಎದ್ದು ಕಾಣುತಿತ್ತು.

ಏನು ಇಬ್ರು ಇಷ್ಟೊಂದು ಬೇಗ ಬಂದು ಬಿಟ್ರಲ್ಲ? ಇಷ್ಟು ಬೇಗ ಎಲ್ಲಾ ಮಾತುಕತೆ ಮುಗಿಸಿ ಬಿಟ್ರಾ? ಎಂದು ಮಗನನ್ನು ಕೇಳಿದ ನಂದಕುಮಾರ್, ಲೀಲಾವತಿ ಸೆರಗಿನ ಹಿಂದೆ ನಿಂತುಕೊಂಡಿದ್ದ ಅಕ್ಷರಳ ಕಡೆಗೆ ತಿರುಗಿ ಏನಮ್ಮ ನನ್ನ ಮಗ ನಿನ್ಗೆ ಹಿಡಿಸಿದ್ನಾ? ಅಕ್ಕರೆಯಿಂದ ಕೇಳಿದರು. ಅಕ್ಷರ ಮಾತಾಡಲು ಉತ್ಸಾಹ ತೋರದೆ ತಲೆತಗ್ಗಿಸಿ ನಿಂತಳು. ಆಕೆಯ ಮೌನ ಕಂಡು ಈ ಹುಡ್ಗಿಗೆ ಅದೆಂತಾ ನಾಚಿಕೆ ಕೊಟ್ಟಿದ್ದಾನೆ ಆ ದೇವರು? ಎಂದು ಹೇಳಿ ನಕ್ಕರು.

ಅಕ್ಷರಳ ಕೋರಿಕೆಯನ್ನು ತನ್ನ ಕೋರಿಕೆ ಎಂಬಂತೆ ತಿಳಿದು ಎಲ್ಲರ ಮುಂದೆ ವಿಷಯ ತೆರೆದಿಡಲು ನಿಖಿಲ್ ಸಮಯಕ್ಕಾಗಿ ಕಾದು ನಿಂತಿದ್ದ. ಆಕೆಗೋಸ್ಕರ ಒಂದು ಸಣ್ಣ ಸುಳ್ಳು ಹೇಳಬೇಕು. ಎಷ್ಟೇ ಆದರೂ ಅವಳು ನನ್ನವಳಲ್ಲವೇ? ಅಂದುಕೊಂಡ.

ಅಪ್ಪ, ಮುಂದಿನ ತಿಂಗಳು ನಿಶ್ಚಿತಾರ್ಥ ನಡೆಸೋದು ಕಷ್ಟವಾಗ್ಬೊಹುದು. ಮುಂದಿನ ತಿಂಗಳು ನನ್ಗೆ ಅಮೆರಿಕಕ್ಕೆ ಹೋಗ್ಬೇಕು. ತುಂಬಾ ಕೆಲಸ ಇದೆ. ಒಂದು ವರ್ಷ ಬಿಟ್ಟು ಮದ್ವೆ ಇಟ್ಟುಕೊಳ್ಳುವ ಸಂಕೋಚದಿಂದ ತನ್ನ ನಿರ್ಧಾರ ಹೇಳಿಕೊಂಡ.

ಏನ್ ಮಾತಾಡ್ತಾ ಇದ್ದೀಯ ನಿಖಿಲ್? ಮದ್ವೆಯಾಗೋದಕ್ಕೆ ತುದಿಗಾಲಲ್ಲಿ ನಿಂತಿದ್ದವನು ಇದೀಗ ದಿಢೀರಾಗಿ ನಿರ್ಧಾರ ಬದಲಾಯಿಸೋದು ಸರಿಯಾ? ಅಮೆರಿಕದಲ್ಲಿದ್ದುಕೊಂಡು ಏನು ಸಾಧಿಸಬೇಕಾಗಿಲ್ಲ. ಕೆಲ್ಸಕ್ಕೆ ರಾಜೀನಾಮೆ ಕೊಟ್ಟು ಬಂದ್ಬಿಡು. ಅಂದ ನಂದಕುಮಾರ್ ಮೊಗದಲ್ಲಿ ಕೋಪದಟ್ಟವಾಗಿ ಕವಿದುಕೊಂಡಿತು. ಎಲ್ಲರೂ ಮದುವೆಗೆ ಒಪ್ಪಿಕೊಂಡಿರುವಾಗ ಸುಮ್ಮನೆ ಅನಾವಶ್ಯಕವಾಗಿ ತಕರಾರು ಎತ್ತಿ ತಾನು ಎಲ್ಲರ ಮುಂದೆ ತಲೆತಗ್ಗಿಸುವಂತೆ ಮಾಡುತ್ತಿದ್ದಾನಲ್ಲ ಎಂದು ತಿಳಿದು ಮಗನ ವಿರುದ್ಧ ಮನದೊಳಗೆ ಕಿಡಿಕಾರಿದರು.

ನಿಖಿಲ್‌ನೊಂದಿಗೆ ಹೊರಗೆ ಹೋದ ಮಗಳು ಎಲ್ಲಾ ವಿಚಾರವನ್ನು ತೆರೆದಿಟ್ಟಿದ್ದಾಳೆಂದು ಭಾವಿಸಿ ಕಳವಳಗೊಂಡ ರಾಜಶೇಖರ್ ಮಗಳ ಕಡೆಗೆ ದೃಷ್ಟಿಬೀರಿ ಏನಾಯಿತು? ಎಂದು ಕಣ್ಣಲ್ಲೇ ಕೇಳಿದ ಪ್ರಶ್ನೆಗೆ ನನ್ಗೇನು ಗೊತ್ತಿಲ್ಲ ಎಂಬಂತೆ ತಲೆ ಅಲ್ಲಾಡಿಸಿದಳು.

ನಿಖಿಲ್, ನೀನು ಅಮೆರಿಕದಲ್ಲಿ ಬೇಕಾದ್ರೂ ಇರು ಅಥವಾ ಇಂಗ್ಲೆಂಡ್‌ನಲ್ಲಿ ಬೇಕಾದ್ರೂ ಇರು. ನಮ್ಮದೇನು ತಕರಾರು ಇಲ್ಲ. ಆದರೆ, ಮದ್ವೆ ಮುಗಿಸಿಕೊಂಡು ಅಕ್ಷರಳನ್ನು ಜೊತೆಗೆ ಕಕೊಂಡು ಹೋಗಬಹುದಲ್ವ್ವ? ಎಂದು ನಿಖಿಲ್ ಬಳಿ ತೆರಳಿ ತುಂಬಾ ವಿನಯದಿಂದ ಕೇಳಿಕೊಂಡರು ರಾಜಶೇಖರ್.

ಕಕೊಂಡೋಗೋದು ದೊಡ್ಡ ವಿಷಯವಲ್ಲ ಅಂಕಲ್. ಆದರೆ, ಅಕ್ಷರಳಿಗೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳೋದಕ್ಕೆ ಕಷ್ಟವಾಗುತ್ತೆ. ಇನ್ನು ಒಂದು ವರ್ಷ ಅಷ್ಟೆ. ದಿನಗಳು ಹೇಗೆ ಕಳೆದುಹೋಗುತ್ತೆ ಎಂಬುದೇ ಗೊತ್ತಾಗೋದಿಲ್ಲ. ಒಂದು ವರ್ಷ ಮದ್ವೆ ಮುಂದೂಡೂವುದು ದೊಡ್ಡ ವಿಚಾರವೇನು ಅಲ್ಲ. ಅವಳನ್ನ ಅಮೆರಿಕಕ್ಕೆ ಕಕೊಂಡೋಗಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಅವಳಿಗೇನಾದ್ರು ಆದ್ರೆ ಏನ್ಮಾಡೋದು? ಅಲ್ಲಿ ಕೆಲಸದ ಒತ್ತಡ ಬೇರೆ. ಅವಳನ್ನ ಚೆನ್ನಾಗಿ ನೋಡಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ. ಇನ್ನು ಮಡಿಕೇರಿಗೆ ಬರುವಷ್ಟರೊಳಗೆ ಮಗಳು ಸೊರಗಿ ಹೋದರೆ ನೀವು ನನ್ನ ಸುಮ್ನೆ ಇರೋದಕ್ಕೆ ಬಿಡ್ತಿರಾ? ಅದ್ಕೋಸ್ಕರ ದಯವಿಟ್ಟು ಒಂದು ವರ್ಷ ಕಾಲಾವಕಾಶ ಕೊಡಿ ಎಂದು ವಿನಮ್ರವಾಗಿ ಕೈಮುಗಿದು ಕೇಳಿಕೊಂಡ.

ಆಯ್ತು, ನಿನ್ನಿಷ್ಟ. ಬೇಡ ಅನ್ನೋದಕ್ಕೆ ನನ್ನಿಂದ ಆಗೋದಿಲ್ಲ. ಮುಂದಿನ ವರ್ಷ ಮದ್ವೆ ಇಟ್ಟುಕೊಳ್ಳುವ. ಮುಂದಿನ ವರ್ಷನೂ ಕೂಡ ಹೀಗೆ ಮತ್ತೆ ಅಮೆರಿಕಕ್ಕೆ ಹೋಗ್ತಿನಿ ಅಂಥ ಹಟ ಮಾತ್ರ ಹಿಡಿಬೇಡ ಮನದೊಳಗೆ ದುಃಖ ತುಂಬಿಕೊಂಡಿದ್ದರೂ  ತಮಾಷೆ ಮಾತುಗಳನ್ನಾಡಿದರು ರಾಜಶೇಖರ್.

ಮನೆಯಲ್ಲಿ ನಡೆಯಬೇಕಾಗಿದ್ದ ಮಂಗಳಕಾರ್ಯ ಅಕ್ಷರ, ನಿಖಿಲ್ ಜೊತೆ ಸೇರಿ ಹೆಣೆದ ಸುಳ್ಳಿನ ಕತೆಯಿಂದ ಒಂದು ವರ್ಷ ದೂರ ಸರಿಯುವಂತಾಯಿತು. ನಂದಕುಮಾರ್ ಮನೆಯಿಂದ ನಿರ್ಗಮಿಸಿದ ನಂತರ ರಾಜಶೇಖರ್ ಮನದಲ್ಲಿ ಮತ್ತೆ ಆತಂಕ ಕವಿದುಕೊಳ್ಳಲು ಪ್ರಾರಂಭಿಸಿತು. ಒಂದು ವರ್ಷದ ಅವಧಿಯಲ್ಲಿ ಇನ್ನೇನಾದರು ಆಗಿ ಹೋದರೆ? ಎಂಬ ಭಯ ಕಾಡಲು ಪ್ರಾರಂಭಿಸಿತು. ಆತಂಕದ ಜೊತೆಗೆ ಮಗಳ ಬಗ್ಗೆ ಅವರಲ್ಲಿ ಅನುಮಾನ ಮತ್ತಷ್ಟು ಹೆಚ್ಚಾಯಿತು.

ಅಕ್ಷರ…, ನಿಖಿಲ್ ಜೊತೆ ಹೋಗಿ ಅವನ ತಲೆ ಹಾಳು ಮಾಡಿ ಮದ್ವೆ ಮುಂದೂಡುವ ಹಾಗೆ ಮಾಡಿದ್ದೀಯ ಅಂತ ನನಗನ್ನಿಸ್ತಾ ಇದೆ. ನಿನ್ನ ಹೊರಗೆ ಕಳುಹಿಸಿದ್ದೇ ನಾನು ಮಾಡಿದ ದೊಡ್ಡ ತಪ್ಪು. ನಿಖಿಲ್ ಮನೆಯಲ್ಲಿ ಇರುವಾಗ ಕೈಗೊಂಡ ನಿರ್ಧಾರ ಮನೆಯಿಂದ ಹೊರಹೋಗಿ ಬರುವಷ್ಟರೊಳಗೆ ಬದಲಾಗಿದೆ ಅಂದ್ರೆ ನಂಬೋದಕ್ಕೆ ಸಾಧ್ಯನಾ? ನೀನು ಏನಾದರು ಹೇಳಿಲೇ ಬೇಕು. ಅದಕ್ಕೆ ಮನನೊಂದು ಮದ್ವೆ ಮುಂದೂಡುವ ನಿರ್ಧಾರ ಕೈಗೊಂಡಿದ್ದಾನೆ. ಸದ್ಯ ಮದುವೆ ಬೇಡ ಅಂತ ಹೇಳ್ಲಿಲ್ಲ. ಅದೊಂದೇ ನಮ್ಮ ಭಾಗ್ಯ ಎಂದು ಮಗಳೆಡೆಗೆ ಸಂಶಯದ ದೃಷ್ಟಿನೆಟ್ಟು ಮಗಳ ಮುಖದಲ್ಲಿ ಯಾವುದಾದರೂ ಬದಲಾವಣೆ ಕಾಣುತ್ತಿದೆಯೇ? ಎಂದು ಸೂಕ್ಷ್ಮವಾಗಿ ಗಮನಿಸಿದರು.

ಸುಳ್ಳು ಹೇಳುವವರ ಮುಖವನ್ನು ಸಂಶಯದ ದೃಷ್ಟಿಯಿಂದ ನೋಡಿದರೆ ಅವರು ಕಸಿವಿಸಿಗೊಂಡು ತಾವು ಹೇಳುತ್ತಿರುವುದು ಸುಳ್ಳು ಎಂದು ತಮ್ಮ ಮನದೊಳಗೆ ಅಂದುಕೊಂಡು ಸಣ್ಣ ಭಯದಿಂದ ಬೆವರಲು ಪ್ರಾರಂಭಿಸುತ್ತಾರೆ ಎಂಬ ವಿಚಾರ ತಿಳಿದು ರಾಜಶೇಖರ್ ಮಗಳ ಮುಖವನ್ನೇ ನೋಡುತ್ತಾ ನಿಂತರೂ ಯಾವುದೇ ಫಲಿತಾಂಶ ದೊರೆಯಲಿಲ್ಲ. ಈ ಹಿಂದೆ ಒಂದ್ಸಲ ಎಸ್ಟೇಟ್‌ನಲ್ಲಿ ಕಾಫಿ ಕಳುವಾದಾಗ ಎಲ್ಲಾ ಕಾರ್ಮಿಕರನ್ನು ಸಂಶಯದ ದೃಷ್ಟಿಯಿಂದ ನೋಡಿ, ಒಂದಷ್ಟು ಗದರಿಸಿದಾಗ ಬೆವರುತ್ತಿದ್ದ ತಮ್ಮ ಮುಖವನ್ನು ಒರೆಸಿಕೊಳ್ಳುತ್ತಿದ್ದ ಇಬ್ಬರು ಕಾರ್ಮಿಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಅವರಿಂದ ಬಾಯಿ ಬಿಡಿಸಿದ್ದರು. ಅಕ್ಷರಳನ್ನು ಸಂಶಯದಿಂದ ನೋಡಿದರೂ ಆಕೆಯ ಮೊಗದಲ್ಲಿ ಯಾವುದೇ ಬೆವರ ಹನಿ ಕಾಣಲಿಲ್ಲ, ಕಣ್ಗಳಲ್ಲಿ ಆತಂಕ ಕವಿದುಕೊಳ್ಳಲಿಲ್ಲ. ಬದಲಾಗಿ ಆಕೆಯ ಕಣ್ಗಳಲ್ಲಿ ಕೋಪ ತುಂಬಿ ತುಳುಕುತಿತ್ತು.

ಇತ್ತೀಚೆಗೆ ನೀವು ನನ್ನ ಬಗ್ಗೆ ಸಂಶಯ ಪಡದ ದಿನಗಳೇ ಇಲ್ಲ. ದಿನಬೆಳಗಾದ್ರೆ ಸಾಕು ಅದೊಂದೇ ನಿಮ್ಮ ಪಾಲಿನ ಕೆಲಸ. ಮದ್ವೆ ವಿಚಾರದಲ್ಲಿ ನಾನೇನು ತಕರಾರು ಎತ್ಲಿಲ್ಲ. ನಿಖಿಲ್ ಜೊತೆ ನನ್ನ ಕಳುಹಿಸಿಕೊಟ್ಟವರೂ ನೀವೇ.., ಇದೀಗ ಆರೋಪ ಹೊರಿಸುತ್ತಿರುವವರು ನೀವೆ… ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ನನ್ನಿಂದ ನಿಖಿಲ್ ಮದ್ವೆ ಮುಂದೂಡಿದ ಅಂತ ನಿಮ್ಗೆ ಅನ್ನಿಸಿದರೆ ಈಗ್ಲೇ ಹೋಗಿ ಕಕೊಂಡು ಬಂದು ಮನೆಯಲ್ಲಿಯೇ ತಾಳಿ ಕಟ್ಟಿಸಿಬಿಡಿ. ನನ್ನ ಅಭ್ಯಂತರವೇನು ಇಲ್ಲ. ನನ್ಗೂ ಈ ಮನೆಯಲ್ಲಿ ನರಕಯಾತನೆ ಅನುಭವಿಸಿ ಸಾಕಾಗಿ ಹೋಗಿದೆ.  ಎಲ್ಲಾದರು ಹೋಗಿ ಹಾಳಾಗಿ ಹೋಗ್ತಿನಿ. ಅದಕ್ಕೆ ಒಂದು ಅವಕಾಶ ಮಾಡಿಕೊಡಿ ಅಪ್ಪನ ಬಗ್ಗೆ ತನ್ನ ಅಸಹನೆ ತೋರ್ಪಡಿಸಿ ಸಿಟ್ಟಿನಿಂದ ಇನ್ನು ನಿಮ್ಮ ಸಹವಾಸ ಸಾಕು ಎಂಬಂತೆ ಕೈ ಮುಗಿದು ಕೇಳಿಕೊಂಡಳು.

ಒಂದೆರಡು ದಿನಗಳು ಯಾವುದೇ ಸದ್ದುಗದ್ದಲವಿಲ್ಲದೆ ಉರುಳಿದವು. ಕಚೇರಿಯಿಂದ ಅಕ್ಷರಳಿಗೆ ಮೇಲಿಂದ ಮೇಲೆ ದೂರವಾಣಿ ಕರೆಗಳು ಬರಲು ಪ್ರಾರಂಭವಾಯಿತು. ಮನೆಗೆ ತೆರಳುತ್ತಿರುವ ವಿಚಾರ ಕಚೇರಿಗೆ ತಿಳಿಸಲೂ ಕೂಡ ಅವಕಾಶ ನೀಡದೆ ಆಕೆಯನ್ನು ರಾಜಶೇಖರ್ ಎಳೆದುಕೊಂಡು ಬಂದಿದ್ದರು. ಕಚೇರಿಯಲ್ಲಿ ಅಕ್ಷರಳ ಗೈರುಹಾಜರಿ ಕಂಡು ಸಹದ್ಯೋಗಿಗಳು ಕಂಗಾಲಾಗಿ ಮನೆಗೆ ಫೋನಾಯಿಸಿದಾಗ ಒಂದೆರಡು ದಿನದೊಳಗೆ ಬತೇನೆ ಅಂತ ಹೇಳಿ ಅವರನ್ನು ಸಮಾಧಾನ ಪಡಿಸುವಷ್ಟರೊಳಗೆ ಸಾಕುಸಾಕಾಗಿ ಹೋಯಿತು. ಅಪ್ಪ, ಅಮ್ಮನನ್ನು ನಂಬಿಸಿ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ನಿರ್ಧರಿಸಿದಳು. ಅಂದೊಂದು ದಿನ ಬೆಳಗ್ಗಿನ ಜಾವ ಅಪ್ಪನ ಮುಂದೆ ಬಂದು ನಿಂತ ಅಕ್ಷರ, ಅಪ್ಪ, ನಾನು ನಾಳೆ ಮೈಸೂರಿಗೆ ಹೊರಡ್ತಾ ಇದ್ದೇನೆ. ಬಂದು ಸಾಕಷ್ಟು ದಿನ ಆಯ್ತು. ಕಾರಣವಿಲ್ಲದೆ ಹೀಗೆ ರಜೆ ಹಾಕಿದ್ರೆ ಕೆಲ್ಸ ಕಳ್ಕೋಬೇಕಾಗುತ್ತೆ. ದಯವಿಟ್ಟು ಹೋಗೋದಕ್ಕೆ ಅವಕಾಶ ಮಾಡ್ಕೊಡಿ ಕೋರಿಕೊಂಡಳು.

ರಾಜಶೇಖರ್ ಅದೊಂದು ವಿಚಾರದಲ್ಲಿ ಮಗಳ ಮೇಲೆ ಕರುಣೆ ತೋರಲು ಮುಂದಾಗಲಿಲ್ಲ. ಮೈಸೂರಿಗೆ ಹೋದರೆ ಅವಳ ಮನಸ್ಸು ಮತ್ತೆ ಬದಲಾಗೋದು ನಿಶ್ಚಿತ. ಪುನಃ ಅದೇ ತಲೆನೋವನ್ನು ಯಾಕೆ ತಂದುಕೊಳ್ಳಬೇಕು? ಇಲ್ಲೇ ಒಂದು ವರ್ಷ ಕಾಲ ಕಳೆಯಲಿ ಅಂದುಕೊಂಡರು.

ನೀನೆಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ ಎಂದು ಮಗಳ ಮುಖ ನೋಡದೆ ಕೋಪದಿಂದ ಹೇಳಿದರು.

ನಾನು ಹೋಗ್ಲೇ ಬೇಕು. ಈ ಜೈಲಲ್ಲಿ ನನ್ಗೆ ಹೆಚ್ಚು ದಿನ ಇರೋದಕ್ಕೆ ಸಾಧ್ಯ ಇಲ್ಲ. ನೀವು ನನ್ನ ಕಳುಹಿಸಿಕೊಡದೆ ಹೋದ್ರೆ ನನ್ನ ಹೆಣ ನೋಡ್ಬೇಕಾಗುತ್ತೆ. ಆ ಮೇಲೆ ನಿಮ್ಮ ಗೌರವ ಏನಾಗುತ್ತದೆ ಎಂದು ನೀವೇ ಹೂಹಿಸಿಕೊಳ್ಳಿ ವಿನಯದ ಮಾತುಗಳನ್ನು ಬದಿಗೆ ಸರಿಸಿ ಬೆದರಿಕೆಯ ಮಾತುಗಳಲ್ಲಿ ಬಂಧಿಸಲು ಪ್ರಯತ್ನಿಸಿದಳು.

ಅಕ್ಷರ ರೋಸಿಹೋಗಿ ಏನಾದರು ಅನಾಹುತ ಮಾಡಿಕೊಂಡು ಬಿಡುತ್ತಾಳೋ ಏನೋ. ಅವಳು ಹೇಳಿದ ಮಾತನ್ನು ಚಾಚು ತಪ್ಪದೆ ಪಾಲಿಸುವವಳು ಎಂಬ ವಿಚಾರ ರಾಜಶೇಖರ್‌ಗೆ ಗೊತ್ತಿಲ್ಲದ್ದೇನು ಇಲ್ಲ. ಇಲ್ಲೇ ಇದ್ದರೆ ಅವಳು ಹೇಳಿದಂತೆ ಏನಾದರು ಅನಾಹುತ ಮಾಡಿಕೊಳ್ಳುತ್ತಾಳೆ. ಮೈಸೂರಿಗೆ ಕಳುಹಿಸುವುದೇ ವಾಸಿ. ಅವಳ ಮೇಲೆ ಒಂದು ಕಣ್ಣಿಟ್ಟರೆ ಸಾಕು ಅಂದುಕೊಂಡು ಮೈಸೂರಿಗೆ ತೆರಳಲು ಅನುಮತಿ ನೀಡಿದರಾದರೂ ಷರತ್ತೊಂದನ್ನು ಮುಂದಿಟ್ಟರು.

ಆಯ್ತು. ಹೋಗುವುದಕ್ಕೂ ಮುಂಚೆ ಒಂದ್ಸಲ ತಣ್ಣೀರಿನಲ್ಲಿ ಸ್ನಾನ ಮಾಡಿ ದೇವರ ಮುಂದೆ ನಿಂತು ಮೈಸೂರಿಗೆ ಹೋದ ನಂತರ ಅಭಿಮನ್ಯುವನ್ನು ಭೇಟಿಯಾಗೋದಿಲ್ಲ. ನನ್ನ ಮನಸ್ಸು ಅಭಿಮನ್ಯುವಿಗೆ ಕೊಡೋದಿಲ್ಲ ಅಂಥ ಪ್ರಮಾಣ ಮಾಡ್ಬೇಕು ಎಂಬ ಷರತ್ತು ವಿಧಿಸಿದರು.

ಅಷ್ಟೇ ತಾನೆ. ಅದೇನು ದೊಡ್ಡ ಕೆಲಸವಲ್ಲ. ಪ್ರೀತಿಗೋಸ್ಕರ ಈಗಾಗ್ಲೇ ಹಲವಾರು ಬಾರಿ ಸುಳ್ಳು ಹೇಳಿ ಆಗಿದೆ. ದೇವರ ಮುಂದೆ ನಿಂತು ಪ್ರಮಾಣ ಮಾಡಿಯೂ ಆಗಿದೆ. ಇದೀಗ ಎರಡನೇ ಬಾರಿ ಪ್ರಮಾಣ ಮಾಡಿದರಾಯ್ತು. ದೇವರಿಗೂ ಕೂಡ ಗೊತ್ತಿಲ್ವ ನನ್ನ ಕಷ್ಟ. ಅವನಿಗೆ ಎಲ್ಲವೂ ಅರ್ಥವಾಗುತ್ತೆ ಅಂದುಕೊಂಡ ಅಕ್ಷರ ಮೈಸೂರಿಗೆ ಹೋಗಲು ಅನುಮತಿ ದೊರೆತ ಸಂಭ್ರಮದಲ್ಲಿ ತರಾತುರಿಯಲ್ಲಿ ಸ್ನಾನ ಮುಗಿಸಿ ಸಂಭ್ರಮದಿಂದ ಹೊರ ಬಂದಳು.

ಅಪ್ಪ ಹೇಳಿಕೊಟ್ಟ ಮಾತನ್ನು ಗಿಳಿಪಾಠದಂತೆ ಹೇಳಿ ಮುಗಿಸಿದ ಅಕ್ಷರ ಮತ್ತೆ ದೇವರ ಮುಂದೆ ಕೈ ಮುಗಿದುನಿಂತು ಮನದೊಳಗೆ ಪ್ರಾರ್ಥಿಸಲು ಪ್ರಾರಂಭಿಸಿದಳು. ದೇವರೇ.., ನಿನ್ನ ಮುಂದೆ ಬಹಿರಂಗವಾಗಿ ಆಡಿದ ಮಾತುಗಳೆಲ್ಲವೂ ಅಪ್ಪನನ್ನು ಮೆಚ್ಚಿಸುವುದಕೋಸ್ಕರ, ನನ್ನ ಪ್ರೀತಿಯನ್ನು ಪಡೆಯುವುದಕೋಸ್ಕರ. ದಯವಿಟ್ಟು ಕ್ಷಮಿಸಿ ಬಿಡು. ನನ್ನ ಅಂತರಂಗ ಪರಿಶುದ್ಧವಾಗಿದೆ. ಅಂತರಂಗದ ಮಾತನ್ನು ಮಾತ್ರ ಆಲಿಸು ದೇವ. ಅದೊಂದೇ ನಿನ್ನಲ್ಲಿ ನಾನು ಕಳಕಳಿಯಿಂದ ಕೇಳಿಕೊಳ್ಳೋದು. ನನ್ನ ಅಂತರಂಗದ ಆಸೆಗಳನ್ನು ಈಡೇರಿಸು ಎಂದು ಶ್ರದ್ಧಾ, ಭಕ್ತಿಯೊಂದಿಗೆ ಪ್ರಾರ್ಥಿಸಿದಳು.

ಅಕ್ಷರ ಮೈಸೂರಿಗೆ ಹೋದ ತಕ್ಷಣ ಅಭಿಮನ್ಯುವಿಗೆ ಫೋನಾಯಿಸಲು ಮರೆಯಲಿಲ್ಲ. ಹಾಸ್ಟೇಲ್‌ಗೆಹೋಗಿ ಕಾಲಿಟ್ಟ ತಕ್ಷಣ ಮೊದಲು ಮಾಡಿದ ಕೆಲಸವೇ ಅದು. ಅಭಿ, ನನ್ನ ದಯವಿಟ್ಟು ಕ್ಷಮಿಸಿಬಿಡು. ಮೊನ್ನೆ ನಿನ್ಗೆ ಫೋನಲ್ಲಿ ಬೈದದ್ದು ಅಪ್ಪನನ್ನು ಸಂತೃಪ್ತಿ ಪಡಿಸುವುದಕೋಸ್ಕರ. ಮನೆಗೆ ಹೋದಾಗಲೆಲ್ಲ ಕಿರುಕುಳ ಕೊಡ್ತನೇ ಇತಾರೆ. ಅಪ್ಪ ಮುಖ ಊದಿಕೊಳ್ಳುವ ಹಾಗೆ ಹೊಡ್ದು ಬಿಟ್ರು. ಮನೆಯಲ್ಲಿ ನನ್ನ ಪರವಾಗಿ ಮಾತಾಡುವ ಒಂದೇ ಒಂದು ಜೀವ ಕೂಡ ಇಲ್ಲ. ನಾನಾದ್ರೂ ಏನು ಮಾಡ್ಲಿ ಹೇಳು? ಎಷ್ಟೂಂತ ಒದೆ ತಿನ್ನೋದಕ್ಕೆ ಸಾಧ್ಯ? ಅಪ್ಪನನ್ನು ಸಂತೃಪ್ತಿ ಪಡಿಸೋದಕೋಸ್ಕರ ಬಾಯಿಗೆ ಬಂದಂತೆ ಮಾತಾಡಿ ಬಿಟ್ಟೆ. ದಯವಿಟ್ಟು ಕ್ಷಮಿಸಿ ಬಿಡು. ಆಡಿದ ಒಂದೇ ಒಂದು ಮಾತೂ ಕೂಡ ನನ್ನ ಹೃದಯದಿಂದ ಹೊರಟ್ಟದಲ್ಲ. ಒದೆ ತಿನ್ನುವುದನ್ನು ತಪ್ಪಿಸಿಕೊಂಡು ಆದಷ್ಟು ಬೇಗ ಮೈಸೂರು ಸೇರಿಕೊಳ್ಳೋದಕೋಸ್ಕರ ಅಪ್ಪನ ಮುಂದೆ ನಾಟಕ ಆಡಬೇಕಾಯಿತು. ನಿನ್ನ ಮನಸ್ಸಿಗೆ ನೋವಾಗಿದೆ ಅಂಥ ನನ್ಗೆ ಚೆನ್ನಾಗಿ ಗೊತ್ತು. ಕ್ಷಮಿಸುವ ದೊಡ್ಡ ಮನಸ್ಸು ಮಾಡ್ಬೇಕು ಎಂದು ಕೋರಿಕೊಂಡ ಅಕ್ಷರ ಅಭಿಮನ್ಯುವಿನಿಂದ ಉತ್ತರ ಕೂಡ ಬಯಸದೆ ಕಣ್ಣೀರಧಾರೆ ಹರಿಸಿದಳು.

ಸಮಾಧಾನ ಮಾಡ್ಕೋ ಅಕ್ಷರ. ನನ್ಗೇನು ಬೇಸರ ಆಗಿಲ್ಲ. ನಿನ್ಗೆ ಆಗಿರುವ ನೋವು, ಬೇಸರದ ಎದುರು ನನ್ನ ನೋವೇನು ದೊಡ್ಡದಲ್ಲ. ನೀನು ನನ್ನ ಎದುರು ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ನೀನು ಯಾವತ್ತಿದ್ದರೂ ನನ್ನವಳೇ. ಒಂದ್ವೇಳೆ ನೀನು ನನ್ನ ಬಿಟ್ಟು ಹೋದ್ರೂ ಕೂಡ ನೀನು ನನ್ನವಳೇ. ಎರಡು ದೇಹಗಳನ್ನು ದೂರ ಸರಿಸಬಹುದು. ಆದರೆ, ಮನಸ್ಸನ್ನು ಸರಿಸೋದಕ್ಕೆ ಯಾರಿಂದ ತಾನೆ ಸಾಧ್ಯವಿದೆ ಹೇಳು? ಸುಮ್ನೆ ಏನೆಲ್ಲ ಯೋಚನೆ ಮಾಡ್ಕೊಂಡು ಮನಸ್ಸು ಹಾಳು ಮಾಡ್ಕೋ ಬೇಡ ಎಂದು ಆಕೆಯನ್ನು ಸಂತೈಸಿದ.

ಅಭಿಮನ್ಯುವಿನ ಮಾತು ಆಕೆಯ ಎಲ್ಲಾ ನೋವುಗಳನ್ನು ಮರೆಸಿತು. ಎಲ್ಲಿ ಅಭಿಮನ್ಯು ಕೋಪ ಮಾಡ್ಕೊಂಡು ನನ್ನಿಂದ ದೂರ ಸರಿದು ಬಿಡ್ತಾನೋ ಎಂಬ ಭಯ ಆಕೆಯಲ್ಲಿ ಕಾಡುತಿತ್ತು. ಅದೀಗ ದೂರವಾಗಿ ಮನಸ್ಸು ಸಹಜ ಸ್ಥಿತಿಗೆ ಮರಳಿತು.  ಇನ್ನು ಯಾವಾಗ ಆ ನರಕಕ್ಕೆ ಬರೋದಕ್ಕೆ ಕರೆ ಬರುವುದೋ ತಿಳಿಯದು. ಇಲ್ಲಿ ಇರುವಷ್ಟು ದಿನ ನೆಮ್ಮದಿಯಿಂದ ಕಾಲ ಕಳೆಯಬೇಕೆಂದು ನಿರ್ಧರಿಸಿದಳು.

ಅಭಿಮನ್ಯುವನ್ನು ಭೇಟಿಯಾಗುವ ಆಸೆ ಆಕೆಯಲ್ಲಿ ಹಿಂದೆದಿಂಗಿಂತಲೂ ಹೆಚ್ಚಾಗಿ ಕಾಡತೊಡಗಿತು. ಆದರೆ, ಅಷ್ಟೊಂದು ಧೈರ್ಯ ಸಾಲದೆ ದಿನ ದೂಡುತ್ತಿದ್ದಳು. ದಿನಗಳುರುಳಿ ತಿಂಗಳು ಸರಿಯುತ್ತಿದ್ದರೂ ಇಬ್ಬರು ಭೇಟಿಯಾಗೋದಕ್ಕೆ ಭಯ ಎಂಬುದು ಅಡ್ಡಗೋಡೆಯಾಗಿ ಬಂದು ನಿಂತುಬಿಟ್ಟಿತ್ತು. ದಿನನಿತ್ಯ ದೂರವಾಣಿ ಸಂಭಾಷಣೆ ಅವರಿಬ್ಬರನ್ನು ಹತ್ತಿರ ಸೇರಿಸುತಿತ್ತು. ದಿನಗಳು ಉರುಳುತ್ತಿದ್ದಂತೆ ಅಕ್ಷರಳಲ್ಲಿ ಒಂಟಿತನ ಹೆಚ್ಚಾಗಿ ಕಾಡಲು ಪ್ರಾರಂಭಿಸಿತು. ದುಃಖ ಎಂಬುದು ತೀರಾ ಹತ್ತಿರದ ಸಂಬಂಧಿಯಾಯಿತು. ಅಭಿಮನ್ಯುವಿನ ಪರಿಸ್ಥಿತಿ ಕೂಡ ಅದಕ್ಕಿಂತ ಭಿನ್ನವಾಗೇನು ಇರಲಿಲ್ಲ. ಆದರೆ, ಅಭಿಮನ್ಯುವನ್ನು ಸಂತೋಷ ಪಡಿಸಲು ಆಗಿಂದಾಗೆ ಸ್ನೇಹಿತರು ಬಂದು ಹೋಗುತ್ತಿದ್ದರು. ಸ್ನೇಹಿತರೊಂದಿಗೆ ಒಂದಷ್ಟು ಹರಟೆ ಹೊಡೆದು ಒಂದು ಪೆಗ್ ಏರಿಸಿಕೊಂಡರೆ ಬಹುತೇಕ ಚಿಂತೆಗಳು ಮರೆತಂತೆ ಆಗುತ್ತಿದ್ದರೂ ಮರುದಿನ ಮತ್ತೆ ದುಃಖ ಆವರಿಸಿಕೊಳ್ಳಲು ಪ್ರಾರಂಭಿಸುತ್ತಿತ್ತು. ವಿರಹವೇದನೆಯ ತೀವ್ರತೆ ಹೆಚ್ಚಾದಂತೆ ಅದೊಂದು ದಿನ ಅಕ್ಷರ ಅಭಿಮನ್ಯುವಿಗೆ ಫೋನಾಯಿಸಿದಳು.  ಅಭಿ, ಹೇಗಿದ್ದೀಯ ಅಂಥ ಫೋನಲ್ಲಿ ಕೇಳೋದಕ್ಕಿಂತ ಎದುರಿಗೆ ನಿಂತು ಕೇಳ್ಬೇಕೂಂತ ಅನ್ನಿಸ್ತಾ ಇದೆ. ಇನ್ನು ನನ್ನಿಂದ ಒಬ್ಬೊಂಟಿಯಾಗಿ ಇರೋದಕ್ಕೆ ಸಾಧ್ಯವಿಲ್ಲ. ನಿನ್ನ ನೋಡ್ಲೇ ಬೇಕು. ನಾಳೆನೇ ಬಂದ್ಬಿಡು. ಎಂಬ ಆಕೆಯ ಧ್ವನಿಯಲ್ಲಿ ಕಾತುರ ಇತ್ತು, ತುಂಬಲಾರದಷ್ಟು ನೋವಿತ್ತು. ದಿನನಿತ್ಯ ಪ್ರೀತಿಯ ರಸಾಸ್ವಾದ ಸವಿದು ಸಂತೋಷದಲ್ಲಿರುತ್ತಿದ್ದ ಆಕೆಗೆ ಇದೀಗ ಒಬ್ಬೊಂಟಿಯಾಗಿ ಕಾಲ ಕಳೆಯೋದಕ್ಕೆ ಸಾಧ್ಯವಾಗುತ್ತಾ ಇಲ್ಲ. ದೂರ ಇದ್ದಷ್ಟು ಹಳೆಯ ನೆನಪುಗಳು ಗರಿಗೆದರಿ ಕುಣಿಯಲು ಪ್ರಾರಂಭಿಸಿತು. ಆದ್ದರಿಂದ ಅಭಿಮನ್ಯುವಿನೊಂದಿಗೆ ಒಂದಷ್ಟು ಹೊತ್ತು ಕಳೆಯಬೇಕೆಂದು ನಿರ್ಧರಿಸಿದಳು.

ಭೇಟಿಯಾಗೋದೇನೋ ಸರಿ. ಮುಂದೆ ಯಾವ ಗ್ರಹಚಾರ ನಮಗೋಸ್ಕರ ಕಾದಿದೆಯೋ ಗೊತ್ತಾಗ್ತಾ ಇಲ್ಲ. ಕಳೆದ ಸಲ ಭೇಟಿಯಾದ ವಿಚಾರ ಮನೆಯವರೆಗೆ ತಲುಪಿ ದೊಡ್ಡ ರಾದ್ಧಾಂತವೇ ನಡೆಯಿತು. ಇಷ್ಟೆಲ್ಲ ಆದ ನಂತರ ನಾಳೆದಿನ ಭೇಟಿಯಾಗುವ ವಿಚಾರವೇನಾದ್ರೂ ಮನೆಗೆ ಗೊತ್ತಾದ್ರೆ ನಮ್ಮಿಬ್ಬರನ್ನ ಸುಮ್ನೆ ಬಿಡ್ತಾರ? ಮೈಸೂರಿನಲ್ಲಿ ಯಾರಾದರೊಬ್ಬರು ಪರಿಚಯದವರು ಇದ್ದೇ ಇತಾರೆ. ಅಲ್ಲಿ ಭೇಟಿಯಾಗೋದು ಸ್ವಲ್ಪ ಕಷ್ಟದ ಕೆಲಸ. ಅದಕ್ಕಿಂತ ಫೋನಲ್ಲಿ ಮಾತಾಡಿಕೊಳ್ಳುವುದೇ ವಾಸಿ ಅಂದ ಅಭಿಮನ್ಯು ಆಕೆಯನ್ನು ಭೇಟಿಯಾಗದೆ ಇರುವುದೇ ಒಳ್ಳೆಯದ್ದೆಂದು ತೀರ್ಮಾನಿಸಿದ.

ಈಗಾಗಲೇ ಸಾಕಷ್ಟು ನೋವು ಅನುಭವಿಸಿಯಾಗಿದೆ. ಮುಂದೆ ಏನು ಗ್ರಹಚಾರ ಕಾದಿದೆಯೋ ನನ್ಗೂ ಕೂಡ ಗೊತ್ತಿಲ್ಲ. ಮುಂದಿನ ದಿನಗಳ ಬಗ್ಗೆ ಯೋಚ್ನೆ ಮಾಡಿ ನಮಗಾಗಿ ಇಂದು ಬಂದಿರುವ ಸಂತೋಷದ ದಿನವನ್ನೇಕೆ ಹಾಳು ಮಾಡ್ಕೋಬೇಕು. ನನ್ಗೆ ನಿನ್ನ ನೋಡ್ಲೇ ಬೇಕು. ಮೈಸೂರಲ್ಲಿ ಭೇಟಿಯಾಗೋದು ಬೇಡ ಅಂದ್ರೆ ಊಟಿಗೆ ಹೋಗುವ. ದೂರದ ಪ್ರದೇಶ. ಅಲ್ಲಿ ಯಾರಾದರು ನೋಡಿಬಿಡುತ್ತಾರೆ ಎಂಬ ಆತಂಕ ಇರೋದಿಲ್ಲ. ಎಲ್ರೂ ನಮ್ಗೆ ಅಪರಿಚಿತರೇ. ಎಲ್ಲಾ ನೋವುಗಳನ್ನು ಮರೆತು ಹಾಯಾಗಿಬೊಹುದು ಅಂದ ಅಕ್ಷರ ಒಂದೆರಡು ಕ್ಷಣ ಮಾತು ನಿಲ್ಲಿಸಿ ಏನೋ ನೆನಸಿಕೊಂಡು ಮಾತು ಮುಂದುವ ರೆಸಿದಳು.ಊಟಿಗೆ ಹೋಗುವುದಾದರೆ ಒಂದು ವಾರ ರಜೆ ಹಾಕಿಬಿಡ್ತೇನೆ. ನೀನು ಬರೋದಕ್ಕೆ  ತಯಾರಿದ್ದೀಯ ತಾನೆ? ಕೇಳಿದಳು.

ನೀನು ಕೇಳಿಕೊಂಡ ಮೇಲೆ ಇಲ್ಲ ಅನ್ನೋದಕ್ಕೆ ಸಾಧ್ಯವುಂಟಾ? ಬಂದೇ ಬತೇನೆ ಎಂದು ಹೇಳುವ ಮೂಲಕ ಊಟಿ ಪಯಣಕ್ಕೆ ಹಸಿರು ನಿಶಾನೆ ತೋರಿದ. ಅಭಿಮನ್ಯುವಿನ ಒಪ್ಪಿಗೆ ದೊರೆತ್ತೊಡನೆ ಎಲ್ಲಿಲ್ಲದ ಸಂಭ್ರಮ ಆಕೆಯಲ್ಲಿ ಮನೆಮಾಡಿ ಕೊಂಡಿತು. ನಿಂತ ಜಾಗದಲ್ಲಿಯೇ ತನ್ನನ್ನು ತಾನೇ ಮರೆತು ಕುಣಿದಾಡಿದಳು. ‘ಮನೆಯವರೊಂದಿಗೆ ಚೆನ್ನಾಗಿದ್ದ ಸಂದರ್ಭದಲ್ಲೂ ಕೂಡ ಅಭಿಮನ್ಯುವಿನೊಂದಿಗೆ ಇಷ್ಟೊಂದು ಸುದೀರ್ಘವಾಗಿ ಒಟ್ಟಿಗೆ ಕಳೆಯೋ ಸೌಭಾಗ್ಯ ದೊರೆಯಲಿಲ್ಲ. ಅದಕ್ಕೆ ಹೇಳೋದು ಆಗುವುದೆಲ್ಲ ಒಳ್ಳೆಯದಕ್ಕೆ ಅಂತ. ಮನೆಯವರೊಂದಿಗೆ ಚೆನ್ನಾಗಿದ್ದಿದ್ದರೆ ಮೈಸೂರಿನಲ್ಲಿ ಕೂತು ಕಾಲ ಕಳೆದು ಬಿಡ್ತಾ ಇದ್ದೊ. ಆದರೆ, ಮನೆಯವರ ಮುನಿಸಿನಿಂದ ಇದೀಗ ಊಟಿಗೆ ಒಟ್ಟಿಗೆ ಹೋಗುವ ಅವಕಾಶ ಸಿಕ್ಕಿದೆ ಅಂದುಕೊಂಡಳು.

ತುಂಬಾ ಸಂತೋಷದಿಂದ ಕುಣಿದು ಕುಪ್ಪಳಿಸಿದ ಅಕ್ಷರ ನೇರ ರೈಲುನಿಲ್ದಾಣಕ್ಕೆ ತೆರಳಿ ಬೆಂಗಳೂರಿನಿಂದ ತಮಿಳುನಾಡಿನ ಮೇಟುಪಾಳ್ಯಂ ಕಡೆಗೆ ತೆರಳಲು ಎರಡು ಟಿಕೆಟ್ ಬುಕ್ ಮಾಡಿಕೊಂಡು ಹಿಂತಿರುಗಿದಳು. ಊಟಿಗೆ ಹೊರಡುವ ಸಂಭ್ರಮದಲ್ಲಿ ಒಂದು ವಾರಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ಮಡಚಿ ಪೆಟ್ಟಿಗೆಗೆ ತುಂಬಿಕೊಂಡಳು. ಖರ್ಚಿಗೆ ಬೇಕಾಗುವಷ್ಟು ಹಣ ಬ್ಯಾಂಕಿನಿಂದ ಡ್ರಾ ಮಾಡಿಕೊಳ್ಳಲು ಮರೆಯಲಿಲ್ಲ.

ಅಭಿಮನ್ಯು ತರಾತುರಿಯಲ್ಲಿ ಬಟ್ಟೆಗಳನ್ನು ಪೆಟ್ಟಿಗೆಗೆ ತುಂಬಿಕೊಂಡು ತನ್ನ ಪ್ರವಾಸಿ ಮಾಹಿತಿ ಕೇಂದ್ರ ಹಾಗೂ ಗಿಫ್ಟ್‌ಸೆಂಟರ್ ನಲ್ಲಿದ್ದ ಒಂದಷ್ಟು ಹಣ ಜೇಬಿಗೆ ತುರುಕಿಕೊಂಡ. ಜೊತೆಗೆ ಬ್ಯಾಂಕಿಗೆ ತೆರಳಿ ಒಂದುವಾರ ಇಬ್ಬರಿಗೆ ಬೇಕಾಗುವಷ್ಟು ಖರ್ಚಿಗೆ ಹಣ ಪಡೆದು ಮನೆಗೆ ಬಂದು ಅಮ್ಮನ್ನು ಭೇಟಿಯಾಗಿ ಸ್ನೇಹಿತರೆಲ್ಲ ಒಟ್ಟಿಗೆ ಒಂದುವಾರ ಊಟಿಗೆ ಟೂರ್ ಹೋಗ್ತಾ ಇದ್ದೇವೆ ಎಂದು ಅಮ್ಮನಿಗೊಂದು ಸುಳ್ಳು ಹೇಳಿ ಮಡಿಕೇರಿಯಿಂದ ರಾತ್ರಿ ಹೊರಟು ಬೆಳಗ್ಗಿನ ಜಾವ ಮೈಸೂರು ತಲುಪಿಕೊಂಡ. ಮುಂಜಾನೆಯ ಚುಮುಚುಮು ಚಳಿಯ ಆಹ್ಲಾದಕರ ವಾತಾವರಣದಲ್ಲಿ ಮೈಸೂರು ಬಸ್ ನಿಲ್ದಾಣದಲ್ಲಿ ಅಕ್ಷರ ಅಭಿಮನ್ಯುವಿಗಾಗಿ ಕಾದು ನಿಂತಿದ್ದಳು. ಅಭಿಮನ್ಯು ಬಸ್ ಇಳಿದು ಬಂದೊಡನೆ ಹಿಂದೆದಿಗಿಂತಲೂ ಆತ್ಮೀಯವಾಗಿ ಅಪ್ಪಿಕೊಂಡಳು.

ಒಂದೆರಡು ತಿಂಗಳ ಅಗಲಿಕೆ ಅವರಿಬ್ಬರಲ್ಲಿ ವರ್ಷಾನುಗಟ್ಟಲೇ ಅಗಲಿದ ಅನುಭವ ಉಂಟು ಮಾಡಿತ್ತು. ಇನ್ನೆಂದು ಒಬ್ಬರನ್ನೊಬ್ಬರು ಭೇಟಿಯಾಗೋದಕ್ಕೆ ಸಾಧ್ಯವಿಲ್ಲವೇನೋ ಎಂಬ ಭಯ ಇಬ್ಬರಲ್ಲಿ ಕಾಡುತಿತ್ತು. ಎಲ್ಲಾ ಭಯವನ್ನು ದೂರ ಸರಿಸಿ ಮತ್ತೆ ಒಂದಾದ ಸಂದರ್ಭವದು. ಎಲ್ಲದಕ್ಕಿಂತ ಹೆಚ್ಚಾಗಿ ಒಂದು ವಾರಗಳ ಕಾಲ ಯಾರ ಭಯವೂ ಇಲ್ಲದೆ ನಿರ್ಭೀತಿಯಿಂದ ಸ್ವಚ್ಛಂದ ಪರಿಸರದಲ್ಲಿ ವಿಹರಿಸಲು ಕೈಗೊಂಡ ನಿರ್ಧಾರವದು. ಆ ನಿರ್ಧಾರ ಸಾಕಾರಗೊಂಡ ಕ್ಷಣ ಇಬ್ಬರಲ್ಲೂ ರೋಮಾಂಚನ ತರಿಸಿತು. ಇಬ್ಬರು ಆಲಂಗಿಸಿಕೊಂಡು ಭಾವುಕರಾದಾಗ ಕಣ್ಣು ಒದ್ದೆ ಆಯಿತು. ಒಬ್ಬರನ್ನೊಬ್ಬರು ಮೈದಡವಿಕೊಂಡು ಸಂತೈಸಿಕೊಂಡರು.

ಅಭಿ, ನೀನು ನನ್ನ ಜೀವ ಕಣೋ ಎಂದು ಮತ್ತೆ ಬಿಗಿದಪ್ಪಿಕೊಂಡಳು.

ಪ್ಲಾಟ್‌ಫಾರಂನಲ್ಲಿ ಬಂದು ನಿಂತಿದ್ದ ಬಸ್ ಏರಿ ಬೆಂಗಳೂರು ಕಡೆಗೆ ಪಯಣ ಬೆಳೆಸಿದರು. ಬಸ್‌ನ ಎಡಬದಿಯಲ್ಲಿ ಇಬ್ಬರು ಕುಳಿತುಕೊಳ್ಳಬಹುದಾದ ಸೀಟಿನಲ್ಲಿ ಇಬ್ಬರು ಕೈ ಕೈ ಹಿಡಿದುಕೊಂಡು ಕುಳಿತರು. ಆ ಕೈಗಳ ಬಂಧನ ಈ ಸಂಬಂಧ ಹೀಗೆಯೇ ಇರಲಿ ಎಂಬ ಸಂಕೇತ ಇದ್ದಂತೆ ತೋರುತ್ತಿತ್ತು. ಇಬ್ಬರು ಮುಖ ನೋಡಿ ನಕ್ಕರು. ಆಗತಾನೆ ಸೂರ್ಯ ತನ್ನ ಕಾಂತಿಯನ್ನು ಭುವಿಗೆ ತೋರ್ಪಡಿಸುವ ತವಕದಲ್ಲಿದ್ದ. ಬೆಳಗ್ಗಿನ ಸಣ್ಣ ಮಬ್ಬುಗತ್ತಲು, ಹಿತವಾದ ಚಳಿಯ ನಡುವೆ ಬಸ್ ಮುನ್ನುಗ್ಗುತ್ತಾ ಸಾಗಿತು.

ಅಕ್ಷರ, ಈ ಕ್ಷಣ ಎಷ್ಟೊಂದು ಸ್ಮರಣೀಯ ಅಲ್ವ?

ಹೌದು ಅಭಿ, ರಾಜಾಸೀಟ್‌ನಲ್ಲಿ ಕಳೆದ ಸಮಯಕ್ಕಿಂತ ಈ ಕ್ಷಣ ಅತ್ಯಂತ ಮಧುರಾತಿಮಧುರ. ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ. ಬಹುಶ: ನಮ್ಮ ದಾಂಪತ್ಯ ಜೀವನದ ಮೊದಲ ಮೆಟ್ಟಿಲು ಅನ್ನಲು ಅಡ್ಡಿ ಇಲ್ಲ ಎಂದು ಹೇಳಿ ತುಂಟನಗೆ ಬೀರಿದಳು.

ಬಸ್ ಇಳಿದು ರೈಲ್ವೇ ನಿಲ್ದಾಣಕ್ಕೆ ನಡೆದೇ ಸಾಗಿದರು. ರೈಲು ಏರಿ ಇಬ್ಬರು ಅಕ್ಕಪಕ್ಕದಲ್ಲಿಯೇ ಅಂಟಿ ಕುಳಿತುಕೊಂಡರು. ಅಲ್ಲಿ ಯಾವುದೇ ಭಯ ಅನ್ನುವುದು ಇರಲಿಲ್ಲ. ರೈಲು ಹೊರಡುವ ಸಂಭ್ರಮಕ್ಕಾಗಿ ಕಾದು ಕುಳಿತ್ತಿದ್ದರು. ನಿಗದಿತ ಸಮಯ ಬಂದೊಡನೆ ರೈಲು ಚಿಕುಬುಕು ಸದ್ದುಗೈಯುತ್ತಾ ನಿಧಾನವಾಗಿ ಮುಂದೆ ಸಾಗಿತು. ಸುಮಾರು ಎಂಟು ತಾಸು ಪಯಣದ ಬಳಿಕ ಮೇಟುಪಾಳ್ಯಂ ತಲುಪಿದರು. ಮೇಟುಪಾಳ್ಯಂನಿಂದ ಊಟಿಗೆ ಇರುವುದು ಒಂದೇ ಟ್ರೈನ್. ಆಮೆವೇಗದಲ್ಲಿ ಚಲಿಸುವ ಟ್ರೈನಿನಲ್ಲಿ ಸಾಕಷ್ಟು ಪ್ರಯಾಣಿಕರು ತುಂಬಿಕೊಂಡಿದ್ದರು. ಇಬ್ಬರು ಟ್ರೈನ್‌ಏರಿ ತಮ್ಮ ಯಾತ್ರೆ ಮುಂದುವರೆಸಿದರು. ಅಲ್ಲಿನ ನಿಸರ್ಗ ಸೌಂದರ್ಯ ಕೊಡಗು ಜಿಲ್ಲೆಯ ನೆನಪನ್ನು ಹೊತ್ತು ತರುತಿತ್ತು. ಕಣ್ಣಾಡಿಸಿದ ಕಡೆಗಳಲೆಲ್ಲ ಬೆಟ್ಟಗುಡ್ಡಗಳ ಸಾಲುಗಳು. ವನದೇವತೆ ಹಸಿರುಡುಗೆ ತೊಟ್ಟು ಪ್ರವಾಸಿಗರಿಗೆ ಆತ್ಮೀಯ ಸ್ವಾಗತ ಕೋರುತ್ತಿದ್ದಳು. ಬೆಟ್ಟಗುಡ್ಡ ಏರುತ್ತಾ ರೈಲು ನಿಧಾನವಾಗಿ ಚಲಿಸುತಿತ್ತು. ಮಾರ್ಗದ ಮಧ್ಯ ಎದುರಾಗುತ್ತಿದ್ದ ಸುರಂಗಗಳನ್ನು ದಾಟಿ ಮುಂದೆ ಸಾಗುತ್ತಿದ್ದ ರೈಲು ಅಗತ್ಯಕ್ಕಿಂತ ಹೆಚ್ಚು ಸದ್ದು ಮಾಡುತ್ತಿತ್ತು. ರೈಲು ನಿಧಾನವಾಗಿ ಚಲಿಸುವುದರಿಂದ ಅಲ್ಲಿನ ನಿಸರ್ಗ ಸೌಂದರ್ಯವನ್ನು ತುಂಬಾ ಸೊಗಸಾಗಿ ಸವಿಯಲು ಸಾಧ್ಯವಾಯಿತು. ರೈಲಿನ ಬೋಗಿಯ ಮೆಟ್ಟಿಲು ಏರಲು ಜೋಡಿಸಿರುವ ಎರಡು ಸಲಾಕೆಗಳನ್ನು ಇಬ್ಬರು ಹಿಡಿದುಕೊಂಡು ಒಮ್ಮೆ ರೈಲಿನಿಂದ ತಲೆ ಹೊರ ಹಾಕಿ ನಿಸರ್ಗದ ಸೊಬಗನ್ನು ಕಣ್ಣಾರೆ ಸವಿದರು. ಜೋರಾಗಿ ತೀಡಿ ಬರುತ್ತಿದ್ದ ತಂಗಾಳಿ ಮೈ ಸೋಕಿ ಪಯಣದ
ಆಯಾಸವನ್ನೆಲ್ಲ ನೀಗಿಸಿತು.

ಕೇವಲ ಇಪ್ಪತ್ತೈದು ಕಿ.ಮೀ. ಪಯಣಕ್ಕೆ ರೈಲು ಸರಿಸುಮಾರು ಎರಡೂವರೆ ತಾಸು ತೆಗೆದುಕೊಂಡಿತು. ರೈಲು ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಚಲಿಸುತಿತ್ತು. ರೈಲು ನಿಧಾನವಾಗಿ ಚಲಿಸುತ್ತಾ ಸಾಗಿದ ಕಾರಣ ಹಸಿರು ಹೊದ್ದು ಮಲಗಿರುವ ಬೆಟ್ಟಗುಡ್ಡಗಳ ಸೌಂದರ್ಯವನ್ನು ಸಂಪೂರ್ಣ ಸವಿಯಲು ಸಾಧ್ಯವಾಯಿತು. ಊಟಿ ತಲುಪಿದೊಡನೆ ತಮ್ಮ ಲಗ್ಗೇಜ್‌ಗಳೊಂದಿಗೆ ರೈಲಿನಿಂದ ಇಳಿದು ಹೋಟೆಲ್ ಕಡೆಗೆ ನಡಿಗೆ ಹಾಕಿ ಟೀ ಕುಡಿಯುತ್ತಾ ಒಂದರ್ಧ ತಾಸು ವಿಶ್ರಾಂತಿ ತೆಗೆದುಕೊಂಡರು. ನಂತರ ಸಮೀಪದಲ್ಲಿಯೇ ಇದ್ದ ಲಾಡ್ಜ್‌ವೊಂದರಲ್ಲಿ ರೂಂ ಬುಕ್ ಮಾಡಿಸಿಕೊಂಡು ಲಗ್ಗೇಜ್‌ಗಳನ್ನು ಇಟ್ಟು ಇಬ್ಬರು ಸ್ನಾನ ಮುಗಿಸಿ ಶುಚಿಯಾದರು. ಅಕ್ಷರ ಆಯಾಸವಾಗಿ ಬೆಡ್‌ಮೇಲೆ ಒಂದಷ್ಟು ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಮಲಗಿಕೊಂಡು ಮಲಗಿದ್ದಲ್ಲಿಂದಲೇ ಮಾತು ಪ್ರಾರಂಭಿಸಿದಳು.

ಅಭಿ… ಹಿತವಾಗಿ ಕರೆದಳು.

ಏನು…? ಎಂದು ನಿಂತಲ್ಲಿಂದಲೇ ಅಷ್ಟೇ ಹಿತವಾಗಿ ಕೇಳಿದ.

ಏನಿಲ್ಲ, ತುಂಬಾ ಸಂತೋಷ ಆಗ್ತಾ ಇದೆ. ಏನು ಹೇಳ್ಬೇಕೂಂತ ತೋಚುತ್ತಿಲ್ಲ. ಅಂದಳು.

ಮಂಚದ ಮೇಲೆ ಅಭಿಮನ್ಯು ಬಂದು ಕುಳಿತಾಗ ಅಕ್ಷರ ಎದ್ದು ಕುಳಿತಳು. ಆಕೆಯ ಮಡಿಲ ಮೇಲೆ ಮಲಗಿ ಈಗ ಏನ್ ಬೇಕಾದ್ರೂ ಮಾತಾಡು, ಎಷ್ಟು ಬೇಕಾದ್ರೂ ಮಾತಾಡು. ಇಲ್ಲಿ ನಿನ್ನ ಹೇಳೋರು ಕೇಳೋರು ಯಾರು ಇಲ್ಲ. ಮಾತಾಡೋದಕ್ಕೆ ಭಯ ಪಟ್ಕೋಬೇಡ.! ಆಕೆಯ ಮೊಗವನ್ನು ನೋಡುತ್ತಾ ಹೇಳಿದ.

ನಾನು ಮಾತಾಡೋದಿಲ್ಲ ನಕ್ಕು ಹೇಳಿದಳು.

ಏನು ಮೌನ ಪ್ರತಿಭಟನೆ ಮಾಡ್ತಾ ಇದ್ದೀಯಾ…?

ಹೌದು ಕಣೋ ಕೋತಿ. ಮಾತಾಡಿಸ್ಬೇಡ ನನ್ನ

ಆಕೆಯನ್ನು ತನ್ನೆಡೆಗೆ ಎಳೆದುಕೊಂಡ ಅಭಿಮನ್ಯು ನಿನ್ನ ಮೌನ ಪ್ರತಿಭಟನೆಯನ್ನ ಇಲ್ಲಿಗೆ ಕೊನೆಗಾಣಿಸಿ ಬಿಡ್ತೇನೆ ಎಂದು ಬಿಗಿದಪ್ಪಿಕೊಂಡು ಚುಂಬಿಸಿ ಈಗಲಾದ್ರೂ ನಿನ್ನ ಮೌನ ಪ್ರತಿಭಟನೆಯನ್ನ ಹಿಂತೆಗೆದುಕೊಳ್ಳೋದಕ್ಕೆ ಸಾಧ್ಯ ಇಲ್ವ? ಎಂದು ತುಂಟನಗೆ ಬೀರುತ್ತಾ ಕೇಳಿದ.

ಆಕೆ ಅದ್ಯಾಕೋ ನಾಚಿ ನೀರಾಗಿ ಹೋದಳು. ಆಕೆಗೆ ಅದು ಅಭಿಮನ್ಯು ನೀಡುತ್ತಿರುವ ಪ್ರಥಮ ಚುಂಬನವಲ್ಲ. ಆದರೂ ಆಕೆ ತುಂಬಾ ನಾಚಿಕೊಂಡಳು. ಆ ನಾಚಿಕೆಗೆ ಹನಿಮೂನ್ ಸಿಟಿ ಕಾರಣವಾಯಿತೋ ಏನೋ? ಸ್ವಲ್ಪ ಹೊತ್ತಿನ ಬಳಿಕ ನಾಚಿಕೆಯಿಂದ ಹೊರ ಬಂದು ತನ್ನ ಮಡಿಲ ಮೇಲೆ ತಲೆ‌ಇಟ್ಟು ಮಲಗಿಕೊಂಡಿದ್ದ ಅಭಿಮನ್ಯುವಿಗೆ ಪ್ರೀತಿಯ ಚುಂಬನ ನೀಡಿ ಮೌನ ಪ್ರತಿಭಟನೆ ಈಗ ಅಂತ್ಯ ಆಯ್ತು ನೋಡು ಎಂದು ಹೇಳಿ ಜೋರಾಗಿ ನಕ್ಕಳು. ಮತ್ತೆ ಮಂಚದ ಮೇಲೆ ಮಲಗಿಕೊಂಡು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ನೀಲಗಿರಿ ಪರ್ವತದ ಕಡೆಗೆ ಪಯಣ ಬೆಳೆಸಿ ದರು. ಎತ್ತ ನೋಡಿದರೂ ಹಸಿರು ಕಂಗೊಳಿಸುತಿತ್ತು. ಅಲ್ಲಿನ ಬೆಟ್ಟ ಸಾಲುಗಳು ಮಡಿಕೇರಿಯ ರಾಜಾಸೀಟನ್ನು ನೆನಪಿಸುತಿತ್ತು. ರಾಜಾಸೀಟ್‌ನ ಮುಂಭಾಗದ ಪ್ರಕೃತಿ ಸೌಂದರ್ಯಕ್ಕಿಂತ ನೀಲಗಿರಿ ಬೆಟ್ಟ ಸಾಲು ತುಸು ಹೆಚ್ಚಿನ ಸೌಂದರ್ಯವನ್ನೇ ಹೊಂದಿತ್ತು. ನೀಲಗಿರಿಯಿಂದ ಕಾಲ್ತೆಗೆದು ಸರಿಸುಮಾರು ಇಪ್ಪತ್ತೆರಡು ಸಾವಿರ ವಿಧದ ಹೂಗಳಿಂದ ಕೂಡಿರುವ ರೋಜ್ಹ್ ಗಾರ್ಡನ್‌ಗೆ ಕಾಲಿಟ್ಟರು. ಕಣ್ಣುಹಾಸಿದ ಕಡೆಗಳೆಲ್ಲ ಹೂವಿನ ಸೌಂದರ್ಯ ಕಂಗೊಳಿಸುತಿತ್ತು. ಅದೆಂಥಹಾ ಸೊಬಗು! ದೇವಲೋಕವೇ ಧರೆಗಿಳಿದು ಬಂದ ಅನುಭವ ನೀಡುತಿತ್ತು. ಇಬ್ಬರು ಕೈ ಕೈ ಹಿಡಿದುಕೊಂಡು ಉದ್ಯಾನವನದ ಮೂಲೆಮೂಲೆಗಳಲ್ಲೂ ಸುತ್ತಾಡಿದರು. ಚೆಲುವು ತುಂಬಿ ತುಳುಕುತ್ತಿದ್ದ ಹೂಗಳ ಮುಂದೆ ನಿಂತು ತಮ್ಮ ಬಳಿ ಇದ್ದ ಕ್ಯಾಮರಾವನ್ನು ಅಲ್ಲೇ ಸುಳಿದಾಡುತ್ತಿದ್ದ ಪ್ರವಾಸಿಗರಿಗೆ ಕೈಗೆ ನೀಡಿ ಫೋಟೋ ತೆಗೆಸಿಕೊಂಡರು.

….. ಮುಂದುವರೆಯುವುದು

ಕಾದಂಬರಿ ಪುಟ ೧೩೧-೧೫೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೋಸ್ತಿ
Next post ಐಸುರ ಛೇ ಇದು ಏನು ಮೊಹರಮದ್ಹಬ್ಬ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys